ಸಮಾಜದಲ್ಲಿ ಬೇರೂರಿರುವ ಅವೈಜ್ಞಾನಿಕ ಸಂಪ್ರದಾಯ ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕಿ, ವೈಜ್ಞಾನಿಕ ರೂಢಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಮಾಜಿಕ ನ್ಯಾಯಕ್ಕೆ ನಿಜವಾದ ಅರ್ಥ ಸಿಗಲು ಸಾಧ್ಯ ಎಂದು ಉದ್ಯಮಿ ಅಗಲೆ ಯಾದವ್ ತಿಳಿಸಿದರು.
ಶ್ರೀರಂಗಪಟ್ಟಣದ ಪ್ರಜ್ಞಾವಂತ ವೇದಿಕೆಯಿಂದ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಅವರಂತಹ ಮಹನೀಯರು ಸಮಸಮಾಜದ ನಿರ್ಮಾಣಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ್ದಾರೆ. ಇಂದು ಆರ್ಥಿಕತೆ ಬೆಳೆದಂತೆ ಮನುಷ್ಯನಲ್ಲಿ ಪ್ರಜ್ಞೆ ಹೆಚ್ಚಾಗಬೇಕಿತ್ತು. ಆದರೆ ಹೊಸ ಹೊಸ ಸಂಪ್ರದಾಯಗಳನ್ನು ಹುಟ್ಟುಹಾಕುವ ಮೂಲಕ ಸಮಾಜದಲ್ಲಿ ಪಿಡುಗುಗಳನ್ನು ಸೃಷ್ಟಿಸಲಾಗುತ್ತಿದೆ. ಜಾತಿಗೊಂದು ಬಣ್ಣ ಕೊಟ್ಟು ಸಂಘರ್ಷ ಉಂಟುಮಾಡಲಾಗುತ್ತಿದೆ. ಇದರಿಂದಾಗಿ ಸೌಲಭ್ಯಗಳು ಕೇವಲ ಉಳ್ಳವರ ಪಾಲಾಗುತ್ತಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಅವಕಾಶಗಳು ಸಿಗುತ್ತಿಲ್ಲ. ಈ ಭೂಮಿಯ ಸಂಪತ್ತು ಮತ್ತು ಪಂಚಭೂತಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಧರ್ಮದ ಹೆಸರಿನಲ್ಲಿ ದೌರ್ಜನ್ಯ; ಫ್ಯಾಸಿಸಂಗೆ ವಿರುದ್ಧ ಸಾಂಸ್ಕೃತಿಕ ಹೋರಾಟದ ಅಗತ್ಯ
ಪ್ರಜ್ಞಾವಂತರ ವೇದಿಕೆಯ ಸಂಚಾಲಕ ಸಿ ಎಸ್ ವೆಂಕಟೇಶ್ ಮಾತನಾಡಿ, “ವಿಶ್ವದಲ್ಲೇ ಶ್ರೇಷ್ಠವಾದ ಲಿಖಿತ ಸಂವಿಧಾನ ನಮ್ಮದಾಗಿದ್ದು, ತಾರತಮ್ಯ ದೂರ ಮಾಡಿ ಎಲ್ಲರಿಗೂ ನ್ಯಾಯಯುತ ಬೆಂಬಲ ನೀಡುವುದು ಇದರ ಮೂಲ ಆಶಯವಾಗಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಮಾತ್ರ ಸಮಾನತೆಯ ಸಮಾಜ ನಿರ್ಮಾಣವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಪ್ರಜ್ಞಾವಂತ ವೇದಿಕೆಯ ಕಾರ್ಯದರ್ಶಿ ಚಿಕ್ಕ ತಮ್ಮೇಗೌಡ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮುಖಂಡರಾದ ಪಾಲಹಳ್ಳಿ ಪ್ರಕಾಶ್, ಉಮೇಶ್, ಜಯಶೀಲ, ಗಿರಿಯಪ್ಪ, ಸುಷ್ಮಾ ಸೇರಿದಂತೆ ಹಲವು ಗಣ್ಯರು ಇದ್ದರು.





