ಮಹಿಳೆಯರು ಸಬಲರಾಗಬೇಕಾದರೆ ಸತತ ಅಧ್ಯಯನ ಮತ್ತು ಪರಿಶ್ರಮ ಇರಬೇಕಾಗುತ್ತದೆ. ಆಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಲು ಪರಿಶ್ರಮ ಹಾಗೂ ಆಯಾ ಕ್ಷೇತ್ರದ ವಿಚಾರಗಳ ಬಗ್ಗೆ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಜಾನಪದ ವಿದ್ವಾಂಸರಾದ ಡಾ. ಸುಜಾತ ಅಕ್ಕಿ ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಂಜಯ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಮಹಿಳೆಯರು ಪ್ರತಿಯೊಂದು ರಂಗದಲ್ಲೂ ಯಶಸ್ಸು ಸಾಧಿಸಲು ಜ್ಞಾನಾರ್ಜನೆ ಮತ್ತು ಶ್ರದ್ಧೆ ಅತ್ಯಗತ್ಯ” ಎಂದು ಕಿವಿಮಾತು ಹೇಳಿದರು.
ಹಿರಿಯ ಗಾಂಧಿವಾದಿ ಡಾ. ಬಿ. ಸುಜಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಆಧುನಿಕತೆಗೆ ತಕ್ಕಂತೆ ಹೊಸ ರೂಪ ಪಡೆದುಕೊಳ್ಳುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
”ನಾವು ಪ್ರಗತಿಶೀಲರಾಗಿದ್ದೇವೆ, ಮಾಡರ್ನ್ ಆಗಿದ್ದೇವೆಂದು ಹೇಳಿಕೊಳ್ಳುತ್ತೇವೆ. ಆದರೆ ಅದಕ್ಕೆ ತಕ್ಕಂತೆ ಮಹಿಳೆಯರ ಸಮಸ್ಯೆಗಳೂ ಕೂಡ ಮಾಡರ್ನ್ ಆಗುತ್ತಿವೆ. ಹಿಂದೆ ಮನೆಯ ನಾಲ್ಕು ಗೋಡೆಗಳಿಗೆ ಅಥವಾ ಅಕ್ಕಪಕ್ಕದವರ ಟೀಕೆಗಳಿಗೆ ಸೀಮಿತವಾಗಿದ್ದ ನಿಂದನೆಗಳು, ಇಂದು ಸೋಷಿಯಲ್ ಮೀಡಿಯಾ ಮೂಲಕ ವಿಶ್ವಾದ್ಯಂತ ವ್ಯಾಪಿಸುತ್ತಿವೆ. ಸ್ವಲ್ಪ ಪ್ರಸಿದ್ಧರಾದ ಮಹಿಳೆಯರಂತೂ ಅಪಾರ ಟೀಕೆ, ನಿಂದನೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ” ಎಂದು ಪ್ರಸ್ತು ವಾಸ್ತವತೆಯನ್ನು ಬಿಚ್ಚಿಟ್ಟರು.
”ಎಲ್ಲ ಕ್ಷೇತ್ರಗಳಲ್ಲೂ ಅಧಿಕಾರಿಶಾಹಿ ಪುರುಷರು ಪ್ರಧಾನರಾಗಿದ್ದಾರೆ. ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೂ ಪರಸ್ಪರ ಕೈ ಹಿಡಿದು ಸಾಗದಿದ್ದರೆ ಇಬ್ಬರೂ ಬೀಳುತ್ತಾರೆ. ನಾವು ಹೊರಜಗತ್ತಿಗೆ ಬಹಳ ಸುಖ-ಸಂತೋಷದಿಂದಿದ್ದೇವೆಂದು ಬಿಂಬಿಸಿಕೊಂಡರೂ, ವಾಸ್ತವದಲ್ಲಿ ಮನೆಯೊಳಗೆ ಪರಸ್ಪರ ಗೌರವ ಹಾಗೂ ಅರ್ಥೈಸಿಕೊಳ್ಳುವಿಕೆಯ ಕೊರತೆ ಎದ್ದುಕಾಣುತ್ತಿದೆ. ನಮ್ಮ ಈ ಸೋಲಿಗೆ ಆರ್ಥಿಕ ಪರಿಸ್ಥಿತಿ ಕಾರಣವಲ್ಲ, ಬದಲಾಗಿ ಒಬ್ಬರಿಗಿಂತ ಮತ್ತೊಬ್ಬರು ಮೇಲು ಎಂಬ ‘ಶ್ರೇಷ್ಠತೆಯ ವ್ಯಸನ’ವೇ ಮುಖ್ಯ ಕಾರಣ” ಎಂದು ವಿಶ್ಲೇಷಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಮಹಿಳೆ ಹಗಲಿರುಳು ದಣಿಯುವ ಶ್ರಮಜೀವಿ : ನ್ಯಾ. ವಿ ಹನುಮಂತಪ್ಪ
“ಸಮಾಜ ಮತ್ತು ಕುಟುಂಬದಲ್ಲಿ ಅಧಿಕಾರಶಾಹಿ ಮನೋಭಾವ ಬಿಟ್ಟು, ಪರಸ್ಪರ ಗೌರವ ನೀಡಿದಾಗ ಮಾತ್ರ ನೈಜ ಪ್ರಗತಿ ಹಾಗೂ ಮಹಿಳೆಯರಿಗೆ ಪ್ರಾಧಾನ್ಯತೆ ದೊರೆಯುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಎನ್ ಸರಸ್ವತಿ, ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ಬಿ ಎಸ್ ವಿಶಾಲಾಕ್ಷಿ, ಶೀಲಾ ನಂಜುಂಡಯ್ಯ, ಮಂಜುಳಾ, ಸುಮಂಗಲಿ, ವಕೀಲರಾದ ಎಸ್ ಆರ್ ಸಿದ್ದೇಶ್, ಸಿ ಎಸ್ ವೆಂಕಟೇಶ್, ಕೆ ಎಸ್ ಜಯಶಂಕರ್, ಪ್ರೊ. ಮಹದೇವ್, ಚಿಕ್ಕತಮ್ಮೆಗೌಡ, ಧನಂಜಯ, ಎಸ್ ಎಂ ಶಿವಕುಮಾರ್, ರಂಗನಾಥ್ ಸೇರಿದಂತೆ ಇತರರು ಇದ್ದರು.





