ನಾಡಗೀತೆಯಲ್ಲಿರುವ ‘ಜೈ ಭಾರತ ಜನನಿಯ ತನುಜಾತೆ, ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ, ಬೌದ್ಧ. ಪಾರ್ಸಿʼ ಎಂಬ ಸಾಲಿನಂತೆ ನಾವೆಲ್ಲರೂ ಈ ಶಾಂತಿಯ ತೋಟದ ಹೂವುಗಳು. ಈ ತತ್ವವನ್ನು ನಾವು ನಮ್ಮ ಬದುಕಿನಲ್ಲಿ ನೆರಳಿನಂತೆ ಹಿಂಬಾಲಿಸಬೇಕು. ಪ್ರೀತಿ-ಸ್ನೇಹವೇ ನಿಜವಾದ ದೇವರು ಎಂದು ಖ್ಯಾತ ಸಾಹಿತಿ ಪ್ರೊ. ತುಕಾರಾಂ ಹೇಳಿದರು.
ರಂಜಾನ್ ಪವಿತ್ರ ಮಾಸಾಚರಣೆಯ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ‘ಸಂಜಯ ಪ್ರಕಾಶನ’ ಮತ್ತು ‘ಪ್ರಜ್ಞಾವಂತರ ವೇದಿಕೆ’ಯ ವತಿಯಿಂದ ಆಯೋಜಿಸಲಾಗಿದ್ದ ‘ರಂಜಾನ್ ಇಫ್ತಾರ್ ಕೂಟ’ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸೌಹಾರ್ದತೆಯ ಪ್ರಾಮುಖ್ಯತೆ ಇಲ್ಲೇ ಇರುವ ʼಪ್ರೀತಿ-ಸ್ನೇಹʼ ಗುರುತಿಸುವುದೇ ನಿಜವಾದ ಧರ್ಮ. ʼಎಲ್ಲೋ ಇರುವ ದೇವರ ಹುಡುಕಿದೆ ಕಲ್ಲು ಮಣ್ಣಿನ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ…” ಎಂಬ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಕವನದ ಸಾಲುಗಳನ್ನು ಉಲ್ಲೇಖಿಸಿದರು. ಮನುಷ್ಯರ ನಡುವಿನ ಪ್ರೀತಿ ವಿಶ್ವಾಸವೇ ನಿಜವಾದ ದೇವರು. ಇಂತಹ ಸೌಹಾರ್ದತೆಯ ಸುದಿನಗಳನ್ನು ನಾವು ಶತಮಾನಗಳ ಕಾಲ ಬೆಳೆಸಿಕೊಂಡು ಹೋಗಬೇಕು” ಎಂದು ಕರೆ ನೀಡಿದರು.
ಗಂಜಾಂನ ಅಮಲೋದ್ಭವ ಚರ್ಚ್ನ ಧರ್ಮಾಧಿಕಾರಿ(ಫಾದರ್) ಸಾಂಘಾಯ್ ಪುಷ್ಪರಾಜ್ ಮಾತನಾಡಿ, ಮುಸ್ಲಿಂ ಬಾಂಧವರಿಗೆ ಚರ್ಚ್ ಹಾಗೂ ಬಿಷಪ್ ಪರವಾಗಿ ರಂಜಾನ್ ಶುಭಾಶಯ ಕೋರಿದರು. ಬಳಿಕ “ಉಪವಾಸ ಎಂದರೆ ಕೇವಲ ಅನ್ನ, ನೀರು ಬಿಡುವುದಲ್ಲ. ಅದು ನಮ್ಮ ಆತ್ಮಾವಲೋಕನದ ಸಮಯ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಮತ್ತು ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಪವಿತ್ರ ಕಾರ್ಯವೇ ಉಪವಾಸ. ಈ ಪುಣ್ಯದ ದಿನಗಳಲ್ಲಿ ಮುಸ್ಲಿಂ ಬಾಂಧವರು ಮಾಡುತ್ತಿರುವ ಪ್ರಾರ್ಥನೆ ಸಮಾಜಕ್ಕೆ ಒಳಿತನ್ನು ತರಲಿ” ಎಂದು ಹಾರೈಸಿದರು.

ಸೌಹಾರ್ದ ಕೂಟದಲ್ಲಿ ಅರ್ಥಗರ್ಭಿತ ಸಂದೇಶ ನೀಡಿದ ಡಾ. ಬಿ. ಸುಜಯ್ ಕುಮಾರ್, ʼಬಂಧು ದರ್ಶನವೇ ಫಲವಲಾ ಸಂಸಾರ ವೃಕ್ಷಕ್ಕೆ…ʼ ಎಂಬ ಪ್ರಸಿದ್ಧ ಸಾಲುಗಳ ಮೂಲಕ ಒಗ್ಗೂಡುವಿಕೆಯ ಮಹತ್ವವನ್ನು ಸಾರಿದರು. ಮೈಸೂರಿನ ಖ್ಯಾತ ವಿಮರ್ಶಕ ಡಾ. ಸಿ ಡಿ ನರಸಿಂಹಯ್ಯನವರ ಪ್ರಸಂಗವನ್ನು ಉಲ್ಲೇಖಿಸಿದ ಅವರು, “ಪ್ರಪಂಚದಲ್ಲಿ ಎಷ್ಟೇ ಸುಂದರವಾದ ಪ್ರಕೃತಿ ಅಥವಾ ಸಾಹಿತ್ಯವಿದ್ದರೂ, ಅವೆಲ್ಲಕ್ಕಿಂತ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಅತ್ಯಂತ ಮುಖ್ಯವಾದದ್ದು. ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಎಷ್ಟೇ ಬೆಳೆದರೂ, ನಾವು ಕೋಟ್ಯಂತರ ರೂಪಾಯಿ ಸಂಪಾದಿಸಿದರೂ, ಮನುಷ್ಯರ ನಡುವಿನ ಬಾಂಧವ್ಯವನ್ನು ಹಾಳುಮಾಡಿಕೊಂಡರೆ ಯಾವುದೇ ಪ್ರಗತಿಗೂ ಅರ್ಥವಿಲ್ಲ” ಎಂದು ಪ್ರತಿಪಾದಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಯುಕೆಪಿ-3ರ ಭೂಸ್ವಾಧೀನ ಜಮೀನುದಾರರಿಗೆ ಪರಿಹಾರ ವಿತರಣೆ
ನಾಡಿನ ಸರ್ವಧರ್ಮ ಸಮನ್ವಯತೆ ಮತ್ತು ಭಾವೈಕ್ಯತೆಗೆ ಅತ್ಯುತ್ತಮ ವೇದಿಕೆಯಾಗಿ ಮೂಡಿಬಂದಿತು. ವಿವಿಧ ಧರ್ಮಗಳ ಮುಖಂಡರು, ಚಿಂತಕರು ಹಾಗೂ ಗಣ್ಯರು ಒಂದೆಡೆ ಸೇರಿ ಸಹೋದರತೆಯ ಸಂದೇಶ ಸಾರಿದರು.
ಈ ಅರ್ಥಪೂರ್ಣ ಇಫ್ತಾರ್ ಕೂಟದಲ್ಲಿ ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ ಎಸ್ ವೆಂಕಟೇಶ್, ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್ ಎಂ ಶಿವಕುಮಾರ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಫ್ಸರ್ ಖಾನ್, ಇನ್ಸಾಫ್ ಸಂಸ್ಥೆಯ ಅಧ್ಯಕ್ಷ, ನೂರ್ ಮರ್ಚೆಂಟ್, ಕ್ಯಾತನಹಳ್ಳಿ ಚಂದ್ರಣ್ಣ, ಎಸ್ ಆರ್ ಸಿದ್ದೇಶ್, ಅಯೂಬ್ ಖಾನ್, ಸಿಂಧುವಳ್ಳಿ ಆಕ್ಟರ್, ಕೆ ಎಂ ಕೃಷ್ಣಕುಮಾರ್, ಆರೋಕ್ಯ ರಾಜ್, ರೇಷ್ಮಾ ಬಾನು, ಸುಜಾತಾ ಅರಸ್ ಸೇರಿದಂತೆ ಇತರರು ಇದ್ದರು.





