ವಿದೇಶಗಳಲ್ಲಿ ಹಿಂದಿ ನುಡಿ ಬೆಳವಣಿಗೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದಷ್ಟೇ ಅನುದಾನವನ್ನು ವಿದೇಶಗಳಲ್ಲಿ ಕನ್ನಡ ನುಡಿ ಬೆಳವಣಿಗೆಗೂ ನೀಡಬೇಕು ಎಂದು ಆಗ್ರಹಿಸಿ ʼನಾವು ದ್ರಾವಿಡ ಕನ್ನಡಿಗರು ಚಳವಳಿʼಯ ವಿದ್ಯಾರ್ಥಿಗಳು ಪ್ರಧಾನ ಮಂತ್ರಿಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಫೆಬ್ರವರಿ ತಿಂಗಳಲ್ಲಿ ಆದಿಚುಂಚನಗಿರಿಗೆ ಪ್ರಧಾನ ಮಂತ್ರಿಗಳು ಭೇಟಿ ನೀಡುವ ಸಂದರ್ಭದಲ್ಲಿ ಈ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಮುತ್ತಿಗೆ ಹಾಕಲಾಗುವುದು ಎಂದು ಘೋಷಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿಗಳ ಮುಖೇನ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
2025ರ ಡಿಸೆಂಬರ್ 28ರಂದು ‘ಮನ್ ಕಿ ಬಾತ್’ ಕಾರ್ಯಕ್ರಮದ 129ನೇ ಸಂಚಿಕೆಯಲ್ಲಿ ಪ್ರಧಾನ ಮಂತ್ರಿಗಳು ದುಬೈನಲ್ಲಿ ಕನ್ನಡಿಗರು ತಮ್ಮ ಸ್ವಂತ ಹಣದಲ್ಲಿ ನಡೆಸುತ್ತಿರುವ ಕನ್ನಡ ಶಾಲೆಗಳನ್ನು ಹೊಗಳಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನಾದ್ಯಂತ ಹಿಂದಿ ನುಡಿ ಪ್ರಚಾರಕ್ಕೆ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿರುವ ಕೇಂದ್ರ ಸರ್ಕಾರ, ವಿದೇಶಗಳಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಜನವರಿ 10ರಂದು ‘ವಿಶ್ವ ಹಿಂದಿ ದಿನ’ ಆಚರಣೆಗೆ ವಿದೇಶಗಳಲ್ಲಿ ಸುಮಾರು 300 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಸಮಾನವಾಗಿ ಕನ್ನಡವೂ ಶಾಸ್ತ್ರೀಯ ಭಾಷೆಯ ಸ್ಥಾನ ಪಡೆದಿರುವಾಗ, ಕನ್ನಡಕ್ಕೂ ಸಮಾನ ಬೆಂಬಲ ನೀಡಬೇಕೆಂದು ಅವರು ಆಗ್ರಹಿಸಿದರು. ದೇಶದ ಪ್ರಧಾನ ಮಂತ್ರಿಗಳು ಕರ್ನಾಟಕಕ್ಕೂ ಪ್ರಧಾನಿಗಳಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೂ ಸರ್ಕಾರದ ಸ್ಪಷ್ಟ ನೀತಿ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
ಇದನ್ನೂ ಓದಿ: ಮಂಡ್ಯ | ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ: ಸತೀಶ್ ಜವರೇಗೌಡ
ವಿದೇಶಗಳಲ್ಲಿ ಜನವರಿ 10ರಂದು ‘ವಿಶ್ವ ಕನ್ನಡ ದಿನ’ ಆಚರಣೆಗೆ ಅಲ್ಲಿನ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಬೇಕು. ಪ್ರತಿ ದೇಶಕ್ಕೂ ಕನಿಷ್ಠ ನಾಲ್ಕು ಕನ್ನಡ ಭಾಷಾ ತಜ್ಞರನ್ನು—ಕನ್ನಡ BA, B.Ed ಪದವೀಧರ ಇಬ್ಬರು ಹಾಗೂ ಕನ್ನಡ MA, PhD ಪಡೆದ ಇಬ್ಬರನ್ನು ಸೂಕ್ತ ಸಂಬಳ ಮತ್ತು ಭತ್ಯೆಗಳೊಂದಿಗೆ ನೇಮಿಸಬೇಕು ಎಂದು ಒತ್ತಾಯಿಸಲಾಯಿತು. ಇದರಿಂದ 200ಕ್ಕೂ ಹೆಚ್ಚು ದೇಶಗಳಲ್ಲಿ 800 ಕನ್ನಡಿಗರಿಗೆ ಉದ್ಯೋಗ ಸಿಗುವುದರ ಜೊತೆಗೆ, ವಿದೇಶದಲ್ಲಿರುವ ಸಾವಿರಾರು ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಅವಕಾಶ ಸಿಗಲಿದೆ ಎಂದು ತಿಳಿಸಲಾಯಿತು.
ಈ ಹೋರಾಟಕ್ಕೆ ಕರ್ನಾಟಕ ಸಂವಿಧಾನ ಸೇನೆ ಹಾಗೂ ಕರವೇ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಂದಾಳುಗಳಾದ ಅಬಿ ಒಕ್ಕಲಿಗ, ಜಯರಾಂ, ಪ್ರದೀಪ್, ಆಫಿಯಾ, ನಂದಿನಿ, ಸಚಿನ್ ಒಕ್ಕಲಿಗ, ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





