ವರ್ಷದ ಹಿಂದೆ ಟೋಲ್ ಸಂಗ್ರಹ ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್ನ ನಿರುಪಯೋಗಿ ಅವಶೇಷಗಳನ್ನು ತೆರವುಗೊಳಿಸದೆ ಅಪಾಯಕಾರಿಯಾಗಿ ಉಳಿಸಿರುವುದರಿಂದ ಅಪಘಾತಗಳು, ಪ್ರಾಣಹಾನಿ ಸಂಭವಿಸುತ್ತಿದ್ದು, ತೆರವುಗೊಳಿಸಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಈ ಕುರಿತು ಹಲವು ಬಾರಿ ಎಚ್ಚರಿಸಿದರೂ ಸ್ಥಳೀಯ ಶಾಸಕರು, ಸಂಸದರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ದೂರಿದ್ದಾರೆ.
ಡಿ.09ರ ರಾತ್ರಿ ಟ್ರಕ್ ಒಂದು ಟೋಲ್ ಗೇಟ್ಗೆ ಡಿಕ್ಕಿ ಹೊಡೆದು ಟೋಲ್ ಗೇಟ್ನ ಅವಶೇಷಗಳು ಕುಸಿದಿವೆ. ಈ ಸ್ಥಳದಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿದ್ದು ಸಂಬಂಧಪಟ್ಟವರು ತಕ್ಷಣವೇ ಅಪಾಯಕಾರಿ ಸ್ಥಿತಿಯಲ್ಲಿರುವ ಟೋಲ್ಗೇಟ್ನ್ನು ತೆರವುಗೊಳಿಸಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ನಿರುಪಯುಕ್ತ ಟೋಲ್ಗೇಟ್ ತೆರವುಗೊಳಿಸಲು ಹೋರಾಟ ಸಮಿತಿಯೇ ಮತ್ತೊಮ್ಮೆ ʼನೇರ ಕಾರ್ಯಾಚರಣೆʼ ಯಂತಹ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಸುರತ್ಕಲ್ ಟೋಲ್ ಗೇಟ್ನಲ್ಲಿ ಟೋಲ್ ಸಂಗ್ರಹ ರದ್ದತಿಗಾಗಿ ಹೋರಾಟ ಸಮಿತಿ ಏಳು ವರ್ಷಗಳ ಕಾಲ ಸತತ ಹೋರಾಟ ನಡೆಸಬೇಕಾಯ್ತು. ಆ ಸಂದರ್ಭದಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಟೋಲ್ ಗುತ್ತಿಗೆದಾರರ ಪರವಾಗಿಯೇ ನಿಂತಿದ್ದರು. ಟೋಲ್ಗೇಟ್ ಮುಚ್ಚುವ ಜನಾಗ್ರಹವನ್ನು ಲಘುವಾಗಿಸಲು ಯತ್ನಿಸಿದರು. ಜನತೆಯ ಸಂಘಟಿತ ಹೋರಾಟಗಳು ಮಾತ್ರ ಜನಪ್ರತಿನಿಧಿಗಳ ಕುಟಿಲತೆಯನ್ನು ವಿಫಲಗೊಳಿಸಿತ್ತು.
ಟೋಲ್ ಸಂಗ್ರಹ ರದ್ದತಿ ಆದೇಶದ ಮುಂದೆ ನಿರುಪಯುಕ್ತ ಟೋಲ್ಗೇಟ್ ಅವಶೇಷಗಳ ತೆರವು ತೀರಾ ಸಣ್ಣ ಕೆಲಸವಾಗಿದೆ. ಸಂಸದ, ಶಾಸಕರು ಮನಸ್ಸು ಮಾಡಿದರೆ ಒಂದೆರಡು ದಿನಗಳಲ್ಲಿ ಟೋಲ್ ಅವಶೇಷಗಳನ್ನು ಸಂಬಂಧಪಟ್ಟವರು ತೆರವುಗೊಳಿಸುತ್ತಾರೆ. ಆದರೆ, ಇಂತಹ ಸಣ್ಣ ಕೆಲಸವನ್ನು ಮಾಡಲು ಮುಂದಾಗದ ಸಂಸದ, ಶಾಸಕರುಗಳು ತಾವು ಜನಪ್ರತಿನಿಧಿಗಳ ಕರ್ತವ್ಯ ನಿರ್ವಹಣೆಗೆ ಅನ್ ಫಿಟ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಜೊತೆಗೆ ತಮ್ಮ ಉದ್ದೇಶ, ನಿರೀಕ್ಷೆಗಳನ್ನು ಮೀರಿ ಸುರತ್ಕಲ್ ಟೋಲ್ ಗೇಟನ್ನು ಐತಿಹಾಸಿಕ ಹೋರಾಟದ ಮೂಲಕ ತೆರವುಗೊಳಿಸಿದ ಹೋರಾಟ ಸಮಿತಿ ಹಾಗೂ ನಾಗರಿಕರ ಮೇಲೆ ಅವಶೇಷ ತೆರವುಗೊಳಿಸದೆ ಸೇಡು ತೀರಿಸಿಕೊಳ್ಳುವಂತೆ ನಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಅಪಘಾತಗಳು, ಪ್ರಾಣ ಹಾನಿ ಸಂಭವಿಸುತ್ತಿದ್ದರೂ ನಿರುಪಯುಕ್ತ ಟೋಲ್ ಗೇಟನ್ನು ಹೆದ್ದಾರಿ ನಡುವೆಯೇ ಉಳಿಸಿ ವಾಹನ ಸವಾರರ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿದ್ದರೆ ಎಂದು ಹೋರಾಟ ಸಮಿತಿ ಅಪಾದಿಸಿದೆ.
ನಂತೂರು, ಸುರತ್ಕಲ್ ಹೆದ್ದಾರಿಯ ರದ್ದುಗೊಂಡಿರುವ ಸುಂಕವನ್ನು ಮತ್ತೆ ಸಂಗ್ರಹಿಸಲು ಹೋರಾಟ ಸಮಿತಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಪಾಯಕಾರಿ ಸ್ಥಿತಿಯಲ್ಲಿರುವ ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ಅವಶೇಷಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ನಿರುಪಯುಕ್ತ ಟೋಲ್ ಗೇಟ್ ತೆರವಿಗೆ ಮತ್ತೊಮ್ಮೆ ʼನೇರ ಕಾರ್ಯಾಚರಣೆʼ ಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಅದಕ್ಕೆಲ್ಲ ಜನವಿರೋಧಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟರೆ ಹೊಣೆಯಾಗುತ್ತಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.





