ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶಾಲಾ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು.
ಪ್ರಸಕ್ತ ಸಾಲಿನಲ್ಲಿ ಆಂಗ್ಲ ಮಾಧ್ಯಮ ಶಾಲೆಯು ಆರಂಭಗೊಂಡು ಸರ್ಕಾರಿ ಶಾಲೆಯೂ ಹೊಸ ಹುರುಪಿನಲ್ಲಿ ಕಾರ್ಯಾಚರಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಿದಾಯತ್ ಅಡ್ಡೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮುಚ್ಚುವ ಹಂತಕ್ಕೆ ಬಂದಿದ್ದ ನಮ್ಮ ಊರಿನ ಈ ಸರ್ಕಾರಿ ಶಾಲೆಯನ್ನು ಅಡ್ಡೂರಿನ ಜನರು ಉಳಿಸಿದ್ದಾರೆ. ಅಡ್ಡೂರು ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯ. ಸರ್ಕಾರಿ ಸೇರಿದಂತೆ ಊರಿನಲ್ಲಿರುವ ಎಲ್ಲರ ಜೀವನವೂ ಅಭಿವೃದ್ಧಿಯಾಗಬೇಕಿದೆ. ಅದಕ್ಕೆ ಈಗಾಗಲೇ ಸಹಕಾರ ನೀಡುತ್ತಿದ್ದೇನೆ. ಇನ್ನು ಮುಂದೆಯೂ ನನ್ನ ಸಹಕಾರ ನೀಡುತ್ತೇನೆ. ಎಲ್ಲರೂ ಒಂದುಗೂಡಿ ಪ್ರೀತಿ, ಸ್ನೇಹದಿಂದ ಸಾಗಿದರೆ ಭವಿಷ್ಯವನ್ನು ಮತ್ತಷ್ಟು ಬೆಳಗಿಸಬಹುದು. ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಕಾರ್ಯ ರಾಜ್ಯದಾದ್ಯಂತ ನಡೆಯಬೇಕಾದ ಅಗತ್ಯವಿದೆ” ಎಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಈಶ್ವರ್, “ಶಿಕ್ಷಣದಲ್ಲಿ ಮುಂದುವರಿದರೆ ಮಾತ್ರ ಭವಿಷ್ಯ ಸಾಧ್ಯ. ಇಂದು ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಎಲ್ಲ ವಿದ್ಯಾರ್ಥಿಗಳ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು. ಮೊಬೈಲ್ ಬಳಕೆ ಇಂದಿನ ಜನತೆಗೆ ವರವಾಗುವುದರ ಜೊತೆಗೆ ಶಾಪವೂ ಆಗುತ್ತಿದೆ, ಹಾಗಾಗಿ, ಈ ಬಗ್ಗೆ ಗಮನಹರಿಸಿ. ಮಕ್ಕಳಿಗೆ ಉತ್ತಮ ಜ್ಞಾನ ನೀಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ” ಎಂದು ಕರೆ ನೀಡಿದರು.
ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಫರಾ ನಾಸಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಯುಪಿ ಇಬ್ರಾಹಿಂ ಮತ್ತು ಅಶ್ರಫ್ ನಡುಗುಡ್ಡೆ ಅತಿಥಿಗಳಾಗಿ ಶಾಲೆಯ ಬೆಳವಣಿಗೆ ಮತ್ತು ಸರ್ಕಾರಿ ಶಾಲೆಯ ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ಮಕ್ಕಳ ಸಾಂಸ್ಕೃತಿಕ ಕಲಾ ಪ್ರತಿಭೆಯು ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕ್ರೀಡೆ ಮತ್ತು ಇತರ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪುರಸ್ಕಾರ ನೀಡಿ, ಗೌರವಿಸಲಾಯಿತು. ಕ್ರೀಡೆಯಲ್ಲಿ ವಿಶೇಷ ಸಾಧನೆಗಾಗಿ ನಮ್ರತಾ ಟೀಚರ್, ಅನಿವಾಸಿ ಉದ್ಯಮಿ ಬಿಸಿಸಿಐ ಅಧ್ಯಕ್ಷರಾದ ಹಿದಾಯತ್, ಅಹ್ಮದ್ ಬಾವ ತೋಕುರ್ ಅವರನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ತನುಶ್ರೀ ಟೀಚರ್ ಸ್ವಾಗತಿಸಿ, ಶ್ವೇತಾ ಟೀಚರ್ ವಂದಿಸಿ, ನಮ್ರತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





