ತುಳು ನಾಡಿನ ಮೌಖಿಕ ಸಾಹಿತ್ಯವು ಇತಿಹಾಸ ಮತ್ತು ಪರಂಪರೆಗಳ ಕೊಂಡಿ. ತುಳುನಾಡಿನ ಮೌಖಿಕ ಸಾಹಿತ್ಯಿಕ ರೂಪಕಗಳನ್ನು ಉಲ್ಲೇಖ ಮಾಡದೆ ತುಳುನಾಡಿನ ಇತಿಹಾಸವನ್ನು ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ತುಕಾರಾಮ ಪೂಜಾರಿ ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕೂಳೂರಿನ ಯೆನೆಪೋಯ ಕಾಲೇಜಿನ ಭಾಷಾಶಾಸ್ತ್ರ ವಿಭಾಗ ಹಾಗೂ ಸಾಹಿತ್ಯ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ತುಳು ಸಾಹಿತ್ಯ ಸಾಂಸ್ಕೃತಿಕ ಬದುಕು’ ವಿಚಾರ ಕೂಟದಲ್ಲಿ ಅವರು ಮಾತನಾಡಿದರು.
ತುಳು ಭಾಷೆಯಲ್ಲಿರುವ ಸಂಧಿ, ಪಾಡ್ದನ, ಉರಲ್, ಎದುರು ಕಥೆಗಳು ಅಗಾಧವಾದ ಜ್ಞಾನ ಭಂಡಾರದ ಪ್ರತೀಕಗಳಾಗಿವೆ. ಈ ಮೌಖಿಕ ಸಾಹಿತ್ಯಗಳಲ್ಲಿ ಅಪಾರವಾದ ಮಾಹಿತಿಯ ಕಣಜವೇ ಇದೆ. ಈ ಮಾಹಿತಿಯ ಮೂಲಕ ತುಳುನಾಡಿನ ಇತಿಹಾಸ ಹಾಗೂ ಪರಂಪರೆಯನ್ನು ಅರಿತುಕೊಳ್ಳಲು ಸಾಧ್ಯವಾಗುವುದು ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಶಾಲಾ ಕಾಲೇಜುಗಳಲ್ಲಿ ತುಳು ಭಾಷೆಯ ಕಾರ್ಯಕ್ರಮ ಆಯೋಜಿಸುವ ಮೂಲಕ ಹೊಸ ತಲೆಮಾರಿಗೆ ತುಳುವಿನ ಬಗ್ಗೆ ಅಭಿರುಚಿ, ಅಭಿಮಾನವನ್ನು ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ” ಎಂದರು.
ಇದನ್ನೂ ಓದಿ: ಮಂಗಳೂರು | ಕುಪ್ಪೆಪದವು, ಇರುವೈಲು ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆಗೆ ಒತ್ತಾಯ
ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್ ರಾಜ್ ಕುತ್ತಾರ್, ಯೆನೆಪೋಯ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಸಾದ್ ಕೆ, ಉಪ ಪ್ರಿನ್ಸಿಪಾಲರಾದ ಶರೀನಾ ಪಿ, ನಾರಾಯಣ ಸುಕುಮಾರ್ ಎ, ಭಾಷಾಶಾಸ್ತ್ರ ವಿಭಾಗ ಮುಖ್ಯಸ್ಥೆ ಶಾಲಿನಿ ಸಿಕ್ವೇರಾ, ಮಾನವಿಕ ವಿಭಾಗದ ಡೀನ್ ಪ್ರೊ. ವಸಂತ ಕುಮಾರ್, ಅಕಾಡೆಮಿ ಸದಸ್ಯ ಸಂಚಾಲಕ ಪಾಂಗಾಳ ಬಾಬು ಕೊರಗ, ಯೆನೆಪೋಯ ಕಾಲೇಜು ಸಾಹಿತ್ಯ ಸಂಘ ಸಂಯೋಜಕ ಡಾ. ದಿನಕರ ಪಚ್ಚನಾಡಿ, ಉಪನ್ಯಾಸಕಿ ಪ್ರಿಯಾ, ಡಾ.ರತ್ನಾಕರ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.





