ವಿವೇಕಾನಂದರು ನಮಗೆಲ್ಲ ಆದರ್ಶ ಪ್ರಿಯರಾಗಿದ್ದರು. ಗಾಂಧೀಜಿ ಹಾಗೂ ವಿವೇಕಾನಂದರು ಹಾಕಿಕೊಟ್ಟ ದಾರಿಯಲ್ಲಿ ಇಂದಿನ ಯುವಜನತೆ ನಡೆದರೆ ಅವರ ಕನಸು ನನಸಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಅಭಿಪ್ರಾಯಪಟ್ಟರು.
ಮಂಗಳೂರಿನ ಕೊಣಾಜೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನನ್ನ ಭಾರತ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 2025-26ನೇ ದಕ್ಷಿಣ ಕನ್ನಡ ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
“ಯುವ ಸಮುದಾಯಕ್ಕೆ ನವ ರಾಷ್ಟ್ರ ಕಟ್ಟುವ ಶಕ್ತಿ ಇದೆ. ಇಂದಿನ ಯುವಕರು ಜಾತ್ಯತೀತ ಧರ್ಮತೀತವಾಗಿ ಯೋಚಿಸಬೇಕು. ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬೇಕು ಆಗ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರ ಕನಸು ನನಸಾಗುತ್ತದೆ. ವಿವೇಕಾನಂದರು 39ನೇ ವರ್ಷದಲ್ಲಿ ಪ್ರಪಂಚದ ಯುವಕರ ಮಾರ್ಗದರ್ಶಕರಾಗಿ ಬೆಳೆದದ್ದು ಅದ್ಭುತ. ಸಣ್ಣ ಪ್ರಾಯದಲ್ಲೇ ದೊಡ್ಡ ಆಲೋಚನೆ ಹೊಂದಿ ಇಂದು ರಾಷ್ಟದ ಯುವಕರಿಗೆ ಆದರ್ಶರಾಗಿದ್ದಾರೆ” ಎಂದರು.

ಇದನ್ನೂ ಓದಿ: ಮಂಗಳೂರು | ಮನು ಇಡ್ಯಾ ತುಳುವಿನ ಯುಗ ಪ್ರವರ್ತಕ ನಾಟಕಕಾರ : ಯು.ಕೆ ಕುಮಾರನಾಥ
ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಹೆಚ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದಾಮೋಧರ ಹಾಗೂ ಯುವಜನ ಇಲಾಖೆಯ ಜಂಟಿ ನಿರ್ದೇಶಕ ಒಕ್ಕೂಟದ ನಿರ್ದೇಶಕ ಪ್ರದೀಪ್ ಡಿ ಸೋಜ ಉಪಸ್ಥಿತರಿದ್ದರು.





