2018ರಿಂದ 2024ರ ವರೆಗಿನ ಬಾಕಿ ಉಳಿಸಿರುವ ಕನಿಷ್ಟ ವೇತನ, 2024ರಲ್ಲಿ ಹೆಚ್ಚಳಗೊಂಡಿರುವ ತುಟ್ಟಿಭತ್ಯೆ ಪಾವತಿಗೆ ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಟೆಲಿಫೋನ್ ಬೀಡಿ ಡಿಪೊಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ, ಗುರುಪುರ, ಸುರತ್ಕಲ್ ಬೀಡಿ ಲೇಬರ್ ಯೂನಿಯನ್, ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘ ಜಂಟಿಯಾಗಿ ಕೈಕಂಬದಲ್ಲಿರುವ ಬೆಳಿಗ್ಗೆ 10ಕ್ಕೆ ಆರಂಭಗೊಂಡ ಮುತ್ತಿಗೆ ಪ್ರತಿಭಟನೆ ಸುಮಾರು ಮೂರು ತಾಸು ಮುಂದುವರೆಯಿತು. ಐದುನೂರಕ್ಕೂ ಹೆಚ್ಚು ಮಹಿಳಾ ಬೀಡಿ ಕಾರ್ಮಿಕರು ಉರಿ ಬಿಸಿಲನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
“2018ರಲ್ಲಿ ತ್ರಿಪಕ್ಷೀಯ ಮಾತುಕತೆಯ ಆಧಾರದಲ್ಲಿ ಸರ್ಕಾರ ನಲವತ್ತು ರೂಪಾಯಿ ಹೆಚ್ಚಿಸಿ ಕನಿಷ್ಟ ಕೂಲಿ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಮಾಲೀಕರು ಈ ಆದೇಶವನ್ನು ಜಾರಿಗೊಳಿಸದೆ ಕಾರ್ಮಿಕರನ್ನು ವಂಚಿಸುತ್ತ ಬಂದಿದ್ದಾರೆ. ಆ ತರುವಾಯ 2024ರಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಲೀಕರ ಪರವಾಗಿ ಹಿಮ್ಮುಖವಾಗಿ ನಿಗದಿಗೊಳಿಸಿ ಕನಿಷ್ಟ ಕೂಲಿ ಕಡಿತಗೊಳಿಸಿ ಏಕಪಕ್ಷೀಯಾಗಿ ಆದೇಶ ಹೊರಡಿಸಲಾಯಿತು” ಎಂದು ಹೇಳಿದರು.
“ಮಾಲೀಕರ ಪರವಾಗಿ ಹಿಮ್ಮುಖವಾಗಿ ಹೊರಡಿಸಲಾದ ಆದೇಶವನ್ನೂ ಜಾರಿಗೊಳಿಸದೆ ಬೀಡಿ ಮಾಲೀಕರು ಕಾರ್ಮಿಕರ ಬಾಕಿ ವೇತನ ಪಾವತಿಸದಿರುವುದನ್ನು ವಿರೋಧಿಸಿ ವಾಮಂಜೂರಿನ ಬೀಡಿ ಸಂಘಗಳು ಹೋರಾಟವನ್ನು ತೀವ್ರಗೊಳಿಸಿದ್ದು, ಜಿಲ್ಲಾದ್ಯಂತ ಮಾಲೀಕರ ಡಿಪೊಗಳ ಮುಂಭಾಗ ಸರಣಿಯಾಗಿ ಪ್ರತಿಭಟನೆ ಮತ್ತು ಮುತ್ತಿಗೆಯಂತಹ ಹೋರಾಟಗಳನ್ನು ನಡೆಸುತ್ತಿವೆ. ಇಂದು ಕೈಕಂಬ, ಗುರುಪುರ, ವಾಮಂಜೂರು, ಕುಪ್ಪೆಪದವು ಪ್ರದೇಶದ ಬೀಡಿ ಕಾರ್ಮಿಕರ ಸಂಘಗಳು ಪ್ರತಿಭಟನೆ ನಡೆಸಿದವು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ವಸಂತ ಆಚಾರಿ, ಬಿ ಶೇಖರ್, ಮುನೀರ್ ಕಾಟಿಪಳ್ಳ, ಬಾಲಕೃಷ್ಣ ಶೆಟ್ಟಿ, ಸದಾಶಿವ ದಾಸ್, ಸೀತಾರಾಮ ಬೇರಿಂಜೆ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಬೀಡಿ ಕಾರ್ಮಿಕರ ಕೂಲಿ ಬಾಕಿ, ಸಿಐಟಿಯು ನಿಯೋಗದಿಂದ ಕಾರ್ಮಿಕ ಸಚಿವ ಸಂತೋಷ ಲಾಡ್ ಭೇಟಿ
ಸ್ಥಳೀಯ ಬೀಡಿ ವಾಮಂಜೂರರ ಸಂಘದ ಪದಾಧಿಕಾರಿಗಳಾದ ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋಧ ಮಳಲಿ, ಭವಾನಿ ವಾಮಂಜೂರು, ಹೊನ್ನಯ್ಯ ಅಮೀನ್ ವಾಮಂಜೂರು, ಕುಸುಮ ಕುಪ್ಪೆಪದವು, ವಾರಿಜ ಕುಪ್ಪೆಪದವು, ಅಶೋಕ ವಾಮಂಜೂರು ಸೇರಿದಂತೆ ಇತರರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.
ನೋಣಯ್ಯ ಗೌಡ ಸ್ವಾಗತಿಸಿ, ವಸಂತಿ ಕುಪ್ಪೆಪದವು ವಂದಿಸಿದರು.





