ಉಡುಪಿ ಜಿಲ್ಲೆಯ ಕೋಟ ಮಣೂರು ಪಡುಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳ ಸಂತೆ ಕಾರ್ಯಕ್ರಮ ಮಕ್ಕಳ ವ್ಯಾಪಾರ ಚತುರತೆ, ಆತ್ಮವಿಶ್ವಾಸ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಎಲ್ಲರ ಗಮನ ಸೆಳೆಯಿತು. ಮಂಗಳವಾರ ಶಾಲಾ ಮೈದಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಸಮುದ್ಯತಾ ಗ್ರೂಪ್ಸ್ ಕೋಟ ಅವರ ಆಶ್ರಯದಲ್ಲಿ ಈ ವಿನೂತನ ಕಾರ್ಯಕ್ರಮ ನಡೆಯಿತು.

ಮಕ್ಕಳ ಸಾಮಾನ್ಯ ಜ್ಞಾನ, ಸಂವಹನ ಕೌಶಲ್ಯ ಹಾಗೂ ಉದ್ಯಮಶೀಲ ಮನೋಭಾವ ಬೆಳೆಸುವ ಉದ್ದೇಶದಿಂದ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಮುಂದಾಳತ್ವದಲ್ಲಿ ಈ ಮಕ್ಕಳ ಸಂತೆ ಆಯೋಜಿಸಲಾಯಿತು. ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲೂ ವ್ಯಾಪಾರ ಜಾಣ್ಮೆ ಮತ್ತು ಆತ್ಮಸ್ಥೈರ್ಯ ಬೆಳೆಯಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಸ್ಪಷ್ಟ ಸಾಕ್ಷಿಯಾಯಿತು.

ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಾರದ ಸಂತೆಯ ಅನುಭವವನ್ನು ಮಕ್ಕಳೇ ಮರುಸೃಷ್ಟಿಸಿದಂತಿತ್ತು. ತರಕಾರಿ, ದಿನಸಿ, ಹಣ್ಣು-ಹಂಪಲುಗಳ ಅಂಗಡಿಗಳ ಮುಂದೆ ದರಪಟ್ಟಿ, ವಸ್ತುಗಳ ಪ್ರದರ್ಶನ, ಗ್ರಾಹಕರನ್ನು ಸೆಳೆಯುವ ಮಾತಿನ ಜಾಣ್ಮೆ ಎಲ್ಲವೂ ಗಮನ ಸೆಳೆಯಿತು. “ಹೊಯ್ ಇಲ್ ಬನಿಯೇ… ದರು ಕಡ್ಮಿ ಇತ್ತೆ…” ಎಂಬ ಮಕ್ಕಳ ಕೂಗು ಸಂತೆಯ ವಾತಾವರಣಕ್ಕೆ ಜೀವ ತುಂಬಿತು.
ಮಕ್ಕಳ ಸಂತೆಯಲ್ಲಿ ಬದನೆಕಾಯಿ, ಕುಂಬಳಕಾಯಿ, ಬೀನ್ಸ್, ಕ್ಯಾರೆಟ್, ತೊಂಡೆ, ಬಟಾಟೆ, ವಿವಿಧ ಸೊಪ್ಪುಗಳು, ಸೆಬು, ಮುಸುಂಬಿ, ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಗ್ರಾಮೀಣ ಹಣ್ಣುಗಳು, ಕಡುಬಿನ ಕೊಟ್ಟೆ ಸೇರಿದಂತೆ ಅನೇಕ ವಸ್ತುಗಳು ವ್ಯಾಪಾರದ ಕೇಂದ್ರವಾಗಿದ್ದವು. ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮಕ್ಕೆ ಜಿಲ್ಲೆಯ ಶೈಕ್ಷಣಿಕ ಪ್ರೋತ್ಸಾಹಕರಾದ ಗೀತಾನಂದ ಟ್ರಸ್ಟ್ನ ಪ್ರವರ್ತಕ ಆನಂದ್ ಸಿ. ಕುಂದರ್ ಚಾಲನೆ ನೀಡಿದರು. ಕೋಟದ ಹೋಟೆಲ್ ಉದ್ಯಮಿ ಕೆ. ವೆಂಕಟೇಶ ಪ್ರಭು ರಿಬ್ಬನ್ ಕತ್ತರಿಸುವ ಮೂಲಕ ಸಂತೆ ವಹಿವಾಟಿಗೆ ಅಧಿಕೃತ ಆರಂಭ ನೀಡಿದರು.

ಈ ಸಂದರ್ಭದಲ್ಲಿ ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್. ಕುಂದರ್, ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್. ನಾಯಕ, ಗೀತಾನಂದ ಟ್ರಸ್ಟ್ನ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ಗಾವಂಕರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಹೊಳ್ಳ, ಕೋಟ ಪಂಚಾಯತ್ ಸದಸ್ಯ ಎಂ. ಜಯರಾಮ ಶೆಟ್ಟಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಗೀತಾನಂದ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ಸಹಕರಿಸಿದರು. ಗೀತಾನಂದ ಟ್ರಸ್ಟ್ ಸದಸ್ಯೆ ವೈಷ್ಣವಿ ರಕ್ಷಿತ್ ಕುಂದರ್ ಕಾರ್ಯಕ್ರಮ ಸಂಯೋಜಿಸಿದರು.

ಮಕ್ಕಳ ಪ್ರತಿಭೆ, ಪರಿಶ್ರಮ ಮತ್ತು ಉತ್ಸಾಹದ ಮೂಲಕ ಸರ್ಕಾರಿ ಶಾಲೆಯೊಂದು ಮಾದರಿ ಕಾರ್ಯಕ್ರಮ ರೂಪಿಸಿದ್ದು, ಮಕ್ಕಳ ಸಂತೆ ಎಲ್ಲರ ಮನಗೆದ್ದಿತು.






