ಕೊಡಗು ಜಿಲ್ಲೆಯ ಹಳ್ಳಿಯೊಂದರಲ್ಲಿ ಯುವಕರು ಮಾದಕ ವಸ್ತುಗಳನ್ನು ಸೇವಿಸದಂತೆ ನಿಯಂತ್ರಿಸಲು ಮಸೀದಿಯೊಂದು ವಿಶಿಷ್ಟ ಕ್ರಮಗಳನ್ನು ಕೈಗೊಂಡಿದೆ. ಮಾದಕ ವಸ್ತುಗಳ ಸೇವನೆಯ ವಿರುದ್ಧ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡುವ ಕಟ್ಟುನಿಟ್ಟಾದ ಸೂಚನೆಗಳಿರುವ ಘಲಕವನ್ನು ಕೊಂಡಂಗೇರಿ ಮಸೀದಿ ಅಳವಡಿಸಿದೆ.
ಕೊಡಗಿನಾದ್ಯಂತ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಹಲವಾರು ಯುವಕರನ್ನು ಕೊಡಗು ಪೊಲೀಸರು ಬಂಧಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ವಿರುದ್ಧದ ಹೋರಾಟ ಮತ್ತು ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಅಂತಹ ಅಭಿಯಾನಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದ ಸುನ್ನಿ ಮುಸ್ಲಿಂ ಜಮಾತ್ ವಿಶಿಷ್ಟ ಹೆಜ್ಜೆ ಇಟ್ಟಿದೆ.
ಗ್ರಾಮದ ಮಸೀದಿಯ ಹೊರಗೆ ಫಲಕವನ್ನು ಹಾಕಲಾಗಿದ್ದು, ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿರುವವರನ್ನು ಜಮಾತ್ ಸಭೆ ಮತ್ತು ಮಸೀದಿಗೆ ಪ್ರವೇಶಿದಂತೆ ನಿರ್ಬಂಧಿಸಲಾಗಿದೆ. ಜೊತೆಗೆ, ವಿಚಿತ್ರ ಶೈಲಿಯ ಕೇಶವಿನ್ಯಾಸ ಮಾಡಿಸಿಕೊಳ್ಳುವುದನ್ನು ನಿಷೇಧಿಲಾಗಿದೆ. ಹರಿದ ಬಟ್ಟೆಗಳನ್ನು ಧರಿಸಿ ಮಸೀದಿಗೆ ಪ್ರವೇಶಿಸುವಂತಿಲ್ಲ ಎಂದೂ ಹೇಳಿದೆ.
“ಯಾವುದೇ ಯುವಕ ಅಥವಾ ಇತರ ಯಾವುದೇ ನಿವಾಸಿಗಳು ಮಾದಕ ವಸ್ತು ಸೇವಿಸುತ್ತಿದ್ದಾರೆಂದು ತಿಳಿದುಬಂದರೆ, ನಾವು ಮೊದಲು ವಿಚಾರಿಸುತ್ತೇವೆ. ಖಚಿತವಾದಲ್ಲಿ ಅವರನ್ನು ‘ಮಾದಕ ವ್ಯಸನ ಬಿಡಿಸುವ ಕೇಂದ್ರ’ಕ್ಕೆ ಸೇರಿಸುತ್ತೇವೆ. ಜಮಾತ್ನಿಂದ ಕೌನ್ಸೆಲಿಂಗ್ಗಳನ್ನು ನಡೆಸುತ್ತೇವೆ. ಅವರು ಮಾದಕ ವಸ್ತು ಸೇವನೆಯನ್ನು ಬಿಡದಿದ್ದರೆ, ಅವರನ್ನು ಕೊಂಡಂಗೇರಿ ಮಸೀದಿಗೆ ಪ್ರವೇಶಿಸದಂತೆ ಬಹಿಷ್ಕರಿಸುತ್ತೇವೆ. ಅಲ್ಲದೆ, ಜಮಾತ್ನಿಂದ ಮದುವೆ ಸಮಾರಂಭದಲ್ಲಿ ನೀಡಲಾಗುವ ಪ್ರಮಾಣಪತ್ರಗಳಲ್ಲಿ ನಾವು ಮಾದಕ ವ್ಯಸನದ ಬಗ್ಗೆ ನಮೂದಿಸುತ್ತೇವೆ” ಎಂದು ಜಮಾತ್ ಕಚೇರಿ ಕಾರ್ಯದರ್ಶಿ ರಫೀಕ್ ಹೇಳಿದ್ದಾರೆ.




