ಸ್ವಚ್ಛ ಮೈಸೂರು ಜಾಗೃತಿಗಾಗಿ ನಡೆದ ಬೃಹತ್ ಸೈಕಲ್ ಜಾಥಾ ಯಶಸ್ವಿಯಾಗಿ ನಡೆಯಿತು. ‘ನಾಳಿನ ಉತ್ತಮ ಪರಿಸರಕ್ಕಾಗಿ, ಇಂದೇ ಏರೋಣ ಸೈಕಲ್ ಸವಾರಿ’ ಎಂಬ ಘೋಷವಾಕ್ಯದೊಂದಿಗೆ ನಡೆದ ಅಭಿಯಾನದಲ್ಲಿ 350ಕ್ಕೂ ಹೆಚ್ಚು ನಾಗರಿಕರು ಹಾಗೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಶನಿವಾರ ಬೆಳಗ್ಗೆ 6-30ಕ್ಕೆ ಮೈಸೂರಿನ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಅಲ್ಲಿಂದ ಆರಂಭವಾದ ಜಾಥಾವು ಕೆ.ಆರ್ ವೃತ್ತ, ದೇವರಾಜು ಅರಸ್ ರಸ್ತೆ, ಬಾಬು ಜಗಜೀವನ್ ರಾಮ್ ವೃತ್ತ, ಆಯುರ್ವೇದಿಕ್ ವೃತ್ತ, ಹೈವೇ ಸರ್ಕಲ್, ಎಲ್.ಐ.ಸಿ ವೃತ್ತ ಮತ್ತು ಜೆ.ಎಸ್.ಎಸ್ ಮೆಡಿಕಲ್ ಕಾಲೇಜು ಮಾರ್ಗವಾಗಿ ಸಾಗಿ, ಸಯ್ಯಾಜಿ ರಾವ್ ರಸ್ತೆ ಮೂಲಕ ಅಂತಿಮವಾಗಿ ಪುನಃ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಮಾರೋಪಗೊಂಡಿತು.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪಾಲಿಕೆಯ ಉಪ ಆಯುಕ್ತರಾದ ಮಂಜು ಸಿ.ಎಸ್ (ಅಭಿವೃದ್ಧಿ), ಸೋಮಶೇಖರ್ ಕೆ.ಜಿ.ಎಸ್. (ಕಂದಾಯ), ಕಾರ್ಯಪಾಲಕ ಎಂಜಿನಿಯರ್ ದೀಪಕ್, ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಮೃತ್ಯುಂಜಯ ಕೆ.ಎಸ್ ಭಾಗವಹಿಸಿದ್ದರು.

ಸೈಕಲ್ ಜಾಥಾದಲ್ಲಿ ರಾಯಲ್ ರೈಡರ್ಸ್ ಮೈಸೂರು, ಸೈಕ್ಲೋಪೀಡಿಯಾ, ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಮೈಸೂರು ಅಥ್ಲೆಟ್ಸ್ ಕ್ಲಬ್, ಮೈಸೂರು ಸೈಕ್ಲಿಂಗ್ ತಂಡದ ಸದಸ್ಯರು, ಪ್ಯಾರಾಮೌಂಟ್, ಮೈ ಬೈಕ್, ಅರ್ನಾಲ್ಡ್ ಫಿಟ್ನೆಸ್ ಮತ್ತು ಕಾಂಗರೂ ಕೇರ್ ಸಂಸ್ಥೆಗಳ ಪ್ರತಿನಿಧಿಗಳು ಬೃಹತ್ ಜಾಥಾಕ್ಕೆ ಸಾಥ್ ನೀಡಿದರು. ನಗರದ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಈ ಸೈಕಲ್ ಜಾಥಾವು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಐ ತಂತ್ರಜ್ಞಾನ ಆಧಾರಿತ ‘ವೈಟಲ್ ವೀವ್ಸ್’ ಬಿಡುಗಡೆ

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್, ಪಾಲಿಕೆಯ ಉಪ ಆಯುಕ್ತ ಮಂಜು ಸಿ.ಎಸ್ (ಅಭಿವೃದ್ಧಿ), ಸೋಮಶೇಖರ್ ಕೆ.ಜಿ.ಎಸ್ (ಕಂದಾಯ), ಕಾರ್ಯಪಾಲಕ ಎಂಜಿನಿಯರ್ ದೀಪಕ್, ಪಾಲಿಕೆ ಆರೋಗ್ಯಾಧಿಕಾರಿ ಮೃತ್ಯುಂಜಯ ಕೆ.ಎಸ್, ವಲಯ ಆಯುಕ್ತ ಪ್ರತಿಭಾ, ರಮೇಶ್, ಮಂಜುನಾಥ್ ರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ, ಮಧುಕರ್ ಸೇರಿದಂತೆ ಪಾಲಿಕೆಯ ಪರಿಸರ ಎಂಜಿನಿಯರ್ಗಳು ಹಾಗೂ ಆರೋಗ್ಯ ನಿರೀಕ್ಷಕರು ಇದ್ದರು.





