ಮೀನುಗಾರ ಸಮುದಾಯಗಳ ಪ್ರತಿಭಟನೆಗಳನ್ನು ಹತ್ತಿಕ್ಕಿ ಮುಂದುವರೆಸುತ್ತಿರುವ ಹೊನ್ನಾವರ ಬಂದರು ನಿರ್ಮಾಣ ಕಾರ್ಯವನ್ನು ಕೈಬಿಡಬೇಕು ಎಂದು ನರ್ಮದಾ ಬಚಾವೋ ಆಂದೋಲನದ ಸಂಸ್ಥಾಪಕ ಸದಸ್ಯೆ ಮತ್ತು ಹೆಸರಾಂತ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹೇಳಿದರು.
ಅಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್(AICCTU), ಪ್ರೈಡೇಸ್ ಫಾರ್ ಪ್ಯೂಚರ್ ಕರ್ನಾಟಕ(FFF-K) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕ(PUCL-K) ಜಂಟಿಯಾಗಿ ಹೊನ್ನಾವರದಲ್ಲಿ ತಯಾರಿಸಿದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಸತ್ಯಶೋಧನಾ ವರದಿಯನ್ನು ನವೆಂಬರ್ 4ರಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
“ಈ ವರದಿಯು 2024ರಲ್ಲಿ ನಡೆಸಲಾಗಿದ್ದ ಸತ್ಯಶೋಧನಾ ಕಾರ್ಯದ ಮುಂದುವರೆದ ಭಾಗವಾಗಿದೆ. ಅಂದಿನಿಂದ ಇಂದಿನವರೆಗೆ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮತ್ತು ಹೊನ್ನಾವರದಲ್ಲಿ ಮೀನುಗಾರ ಸಮುದಾಯಗಳು ನಡೆಸಿರುವ ಹೋರಾಟವನ್ನು ದಾಖಲಿಸಿ ಅವರ ಬೇಡಿಕೆಗಳನ್ನು ಸಾರ್ವಜನಿಕರ ಗಮನಕ್ಕೆ ತರಲು ಈ ವರದಿಯನ್ನು ಸಿದ್ಧಪಡಿಸಲಾಗಿದೆ” ಎಂದು ಹೇಳಿದರು.
“ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್(HPPL)ಗೆ ಕಾಸರಗೋಡು ವಾಣಿಜ್ಯ ಬಂದರನ್ನು ಅಭಿವೃದ್ಧಿಪಡಿಸಲು 2010ರಲ್ಲಿ, ಅನುಮತಿ ನೀಡಿದಾಗಿನಿಂದಲೂ ಈ ಪ್ರದೇಶದಲ್ಲಿ ಈ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಿದ್ದು, ಸದರಿ ಯೋಜನೆಗೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಮೀನುಗಾರರೇ ಹೆಚ್ಚಿರುವ ಟೋಂಕಾ 1, ಟೋಂಕಾ 2. ಪಾವಿನ್ಕುರ್ವ, ಮಲ್ಲುಕುರ್ವ ಮತ್ತು ಹೊನ್ನಾವರ ಗ್ರಾಮೀಣ ಈ ಐದು ಗ್ರಾಮಗಳಿಗೆ ಸೇರಿದ 44 ಹೆಕ್ಟೇರ್ ಭೂಮಿಯಲ್ಲಿ ಈ ಬಂದರನ್ನು ಸ್ಥಾಪಿಸಲು ಯೋಜಿಸಲಾಗಿದೆ. ಸ್ಥಳೀಯ ಸಮುದಾಯಗಳಿಂದ ಒಪ್ಪಿಗೆ ಪಡೆದುಕೊಳ್ಳದೆಯೇ ಮತ್ತು ಸಂವಿಧಾನದಡಿಯಲ್ಲಿ ಪಾಲಿಸಬೇಕಿರುವ ಪರಿಸರ ಸುರಕ್ಷತಾ ಕ್ರಮಗಳನ್ನು ಸದರಿ ಯೋಜನೆಯು ಗಾಳಿಗೆ ತೂರಿದೆ ಎಂಬುದನ್ನು ಈ ವರದಿ ಬಹಿರಂಗಪಡಿಸುತ್ತದೆ” ಎಂದು ತಿಳಿಸಿದರು.
“ನಿರ್ಮಿಸಬೇಕೆಂದು ಯೋಜಿಸಲಾಗಿರುವ ಬಂದರಿನಲ್ಲಿ ಎರಡು ಮುಖ್ಯ ಘಟಕಗಳಿವೆ. ಒಂದು, ಬಂದರು ನಿರ್ಮಾಣ(44 ಹೆಕ್ಟೇರ್) ಮತ್ತು ಎರಡನೆಯದು, ಬಂದರಿಗೆ NH66 ರ ಸಂಪರ್ಕವನ್ನು ಸಾಧಿಸಿಕೊಡುವ ನಾಲ್ಕು-ಪಥದ ನಾಲ್ಕು ಕಿಲೋಮೀಟರ್ಗಳ ರಸ್ತೆ ನಿರ್ಮಾಣ ಕಾಮಗಾರಿ, ಮೀನುಗಾರ ಸಮುದಾಯಗಳು ಆಯೋಜಿಸಿದ್ದ ಬಂದರು ಯೋಜನೆ ವಿರುದ್ಧದ ಶಾಂತಿಯುತ ಪ್ರತಿಭಟನೆಗಳನ್ನು ಕ್ರೂರವಾಗಿ ಹತ್ತಿಕ್ಕಿದ ನಂತರವಷ್ಟೇ ರಸ್ತೆ ನಿರ್ಮಾಣ ಯೋಜನೆಯಿಂದ ಯಾವುದಾದರೂ ಸಮಸ್ಯೆಗಳು ತಲೆದೋರಲಿವೆಯೇ ಎಂಬುದನ್ನು ಅರಿತಿಕೊಳ್ಳಲು ಸಮೀಕ್ಷೆಗಳನ್ನು ನಡೆಸಿರುವುದನ್ನು ವರದಿ ಬಹಿರಂಗಪಡಿಸಿದೆ” ಎಂದು ಹೇಳಿದರು.
“ಸಮೀಕ್ಷೆಯ ಹಿಂದಿನ ರಾತ್ರಿ, ಸೆಕ್ಷನ್ 163 ಬಿಎನ್ಎಸ್ಎಸ್ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಹೊರಡಿಸಲಾಯಿತು. ಮರುದಿನ ಬೆಳಿಗ್ಗೆ, ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಕಂಪನಿಯ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಲು ಮುಂದಾದರು. ಸಮುದಾಯದ ಜನರು ಸೇರಿ ಬಂದರು ಮತ್ತು ರಸ್ತೆ ನಿರ್ಮಾಣದ ವಿರುದ್ಧ ಧ್ವನಿ ಎತ್ತಿದರು. ಅವರೆಲ್ಲರನ್ನು ಪೊಲೀಸರು ಹಿಂಸಿಸಿದರು ಮಾತ್ರವಲ್ಲ, ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದರು. ಹೀಗೆ ಪೊಲೀಸರ ಹಿಂಸಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತರ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಪೊಲೀಸರು ಹಾಜರಿದ್ದರು. ಅಲ್ಲದೆ ಪೊಲೀಸ್ ಹಿಂಸಾಚಾರದಿಂದ ಗಾಯಗಳಾಗಿವೆ ಎಂಬುದನ್ನು ದಾಖಲಿಸಲು ವೈದ್ಯರು ನಿರಾಕರಿಸಿದರು ಎಂಬುದಾಗಿಯೂ ವರದಿ ದಾಖಲಿಸುತ್ತದೆ. ಪೊಲೀಸರ ಕಿರುಕುಳ ಮತ್ತು ಬೆದರಿಕೆಗಳು ಮುಂದುವರೆದಿದ್ದು, ಅಲ್ಲಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಸಮುದಾಯದಲ್ಲಿನ ಆಗು-ಹೋಗುಗಳ ಬಗ್ಗೆ ಕಣ್ಣಾವಲು ಇರಿಸಲಾಗಿದೆ” ಎಂದರು.
“ಯೋಜನೆಗಾಗಿ ತಮ್ಮ ಮನೆ ಮತ್ತು ಭೂಮಿಯನ್ನು ಕಳೆದುಕೊಂಡಿರುವುದಲ್ಲದೇ, ಬಂದರು ನಿರ್ಮಾಣವು ಮೀನುಗಾರರ ಜೀವನೋಪಾಯಕ್ಕೂ, ಅಲ್ಲಿನ ಪರಿಸರ ಸಮತೋಲನಕ್ಕೂ ಅಪಾಯವನ್ನು ಉಂಟುಮಾಡುತ್ತದೆಂದು ವರದಿ ದಾಖಲಿಸಿದೆ. ಬ್ರೇಕ್ ವಾಟರ್ಗಳ ನಿರ್ಮಾಣವು ನಿಧಾನವಾಗಿ ಕರಾವಳಿಯ ಸವೆತಕ್ಕೆ ಕಾರಣವಾಗುತ್ತದೆ. ಶರಾವತಿ ನದಿಯು ವಿವಿಧ ಮೀನುಗಳ ಪ್ರಬೇಧಗಳಿಗೆ, ಅದರಲ್ಲಿಯೂ ಮುಖ್ಯವಾಗಿ ನದಿ ಮುಖದಲ್ಲಿ ಮಾತ್ರವೇ ಕಂಡುಬರುವ ಮೀನು ಪ್ರಬೇಧಗಳಿಗೆ ನೆಲೆಯಾಗಿದೆ” ಎಂದು ತಿಳಿಸಿದರು.
“ಕಡಲತೀರ ಪ್ರದೇಶವು ಅಳಿವಿನಂಚಿನಲ್ಲಿರುವ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಪ್ರಭೇದವಾದ ಅಲಿವ್ ರಿಡ್ಡೆ ಟರ್ಟಲ್(ಅಮೆ)ಗಳು ಗೂಡುಗಳನ್ನು ಕಟ್ಟಿಕೊಳ್ಳುವ ತಾಣವಾಗಿದೆ. HPPLನಿಂದ ಅನುಮೋದನೆಗಳು ಮತ್ತು ಅನುಮತಿಗಳನ್ನು ಪಡೆವ ಪ್ರಕ್ರಿಯೆಯನ್ನೂ ಗಾಳಿಗೆ ತೂರಲಾಗಿದೆ ಎಂಬುದನ್ನೂ ಕೂಡ ವರದಿ ಎತ್ತಿ ತೋರಿಸುತ್ತದೆ. ಸಾಲದೆಂಬಂತೆ ಎನ್ಚಿಟಿ(NGT) ಮತ್ತು ಹೈಕೋರ್ಟ್ನಲ್ಲಿ ನಡೆದ ಇತ್ತೀಚಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ವರದಿ ಒದಗಿಸುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಚಿಲ್ಲರೆ ಸಿಗರೇಟ್ ಮಾರುವ ಅಂಗಡಿ ಬಂದ್ ಮಾಡಲು ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚನೆ
“ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಹಿಂಸಾಚಾರ ನಡೆಸಿದ್ದಕ್ಕಾಗಿ ಪೊಲೀಸರಿಗೆ ಶಿಕ್ಷೆಯಾಗಬೇಕು. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲೆಂದೇ ದಾಖಲಿಸಲಾಗಿರುವ ಎಲ್ಲ ಸುಳ್ಳು ಪ್ರಕರಣಗಳನ್ನು ಕೂಡಲೇ ಕೈಬಿಡಬೇಕೆಂದು ವರದಿ ಶಿಫಾರಸು ಮಾಡುತ್ತದೆ. ಬಂದರು ಯೋಜನೆಯ ನಿರ್ಮಾಣಕ್ಕಾಗಿ ನೀಡಲಾಗಿರುವ ಅನುಮೋದನೆಗಳನ್ನೂ ಪರಿಸರ ಸಂಬಂಧಿತ ಅನುಮತಿಗಳನ್ನೂ(Environmental Clearance) ಈ ಕೂಡಲೇ ರದ್ದುಗೊಳಿಸಬೇಕು” ಎಂದು ವರದಿ ಮೂಲಕ ಒತ್ತಾಯಿಸಿದ್ದಾರೆ.





