ಬೆಂಗಳೂರು ನಗರದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪರದಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿಗದಿತ ಸಮಯಕ್ಕೂ ಮುನ್ನವೇ ಪ್ರವೇಶ ದ್ವಾರವನ್ನು ಮುಚ್ಚಿದ ಭದ್ರತಾ ಸಿಬ್ಬಂದಿಯ ಜತೆ ಪ್ರಯಾಣಿಕರೊಬ್ಬರು ವಾಗ್ವಾದ ನಡೆಸಿದ್ದು, ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ರಾತ್ರಿ 10 ಗಂಟೆಯ ಸುಮಾರಿಗೆ ರಂಜಿತ್ ಎನ್ನುವ ಪ್ರಯಾಣಿಕರು ಅತ್ತಿಗುಪ್ಪೆ ಮೆಟ್ರೋದಿಂದ ಇಂದಿರಾನಗರಕ್ಕೆ ತೆರಳಬೇಕಿತ್ತು. ಆದರೆ ಮೆಟ್ರೋ ನಿಲ್ದಾಣದ ಗೇಟ್ ‘ಎ’ ಭಾಗದಲ್ಲಿ ಭದ್ರತಾ ಸಿಬ್ಬಂದಿ ಸ್ಕ್ಯಾನರ್ ತೆರವುಗೊಳಿಸಿ, ಗೇಟ್ ಮುಚ್ಚಿರುವುದರಿಂದ ಅವರಿಗೆ ಒಳಗೆ ಪ್ರವೇಶ ನಿರಾಕರಿಸಲಾಗಿದೆ. ಅವಧಿ ಮುಗಿಯುವ ಮೊದಲು ಪ್ರವೇಶ ನಿರಾಕರಣೆ ಮಾಡಿದ ಬಗ್ಗೆ ರಂಜಿತ್ ಪ್ರಶ್ನಿಸಿದಾಗ ಭದ್ರತಾ ಸಿಬ್ಬಂದಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಸ್ಥಳದಲ್ಲಿದ್ದ ಇತರ ಪ್ರಯಾಣಿಕರೂ ಸಹ ಭದ್ರತಾ ಸಿಬ್ಬಂದಿಯ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದು, ವಿಡಿಯೋ ವೈರಲ್ ಆಗಿದೆ.




