ಕುರ್ಆನ್ ಕಂಠಪಾಠದಿಂದ ಮಾನವನ ಮನಸ್ಸಿಗೆ ಶಾಂತಿ ಮತ್ತು ಆತ್ಮಿಕ ಬಲ ದೊರೆಯುತ್ತದೆ. ಇಸ್ಲಾಂನಲ್ಲಿ ಕುರ್ಆನ್ ಹಾಫಿಝ್ರ ಸ್ಥಾನ ಅತ್ಯಂತ ಉನ್ನತವಾಗಿದ್ದು, ಕುರ್ಆನ್ ಅನ್ನು ಹೃದಯದಲ್ಲಿ ಸಂಗ್ರಹಿಸುವವರು ಅಲ್ಲಾಹ್ಗೆ ಅತ್ಯಂತ ಪ್ರಿಯರಾಗಿರುತ್ತಾರೆ. ಹಾಫಿಝ್ರಿಗೆ ಸ್ವರ್ಗದಲ್ಲಿ ಉನ್ನತ ದರ್ಜೆಗಳು ಲಭಿಸುತ್ತವೆ. ಅಲ್ಲದೆ ಹಾಫಿಝ್ರ ಪೋಷಕರಿಗೆ ಕಿಯಾಮತ್ ದಿನದಲ್ಲಿ ಪ್ರಕಾಶಮಾನವಾದ ಕಿರೀಟವನ್ನು ನೀಡಲಾಗುತ್ತದೆ ಎಂದು ಕಂಡ್ಲೂರಿನ ಜಾಮಿಯಾ ಝಿಯಾ ಉಲ್ ಉಲೂಮ್ನ ಅಧ್ಯಾಪಕರು ಹಾಗೂ ಕಂಡ್ಲೂರು ಜಾಮಿಯಾ ಮಸೀದಿಯ ಖತೀಬರಾದ ಮೌಲಾನಾ ಮುಹಮ್ಮದ್ ಇಲ್ಯಾಸ್ ನದ್ವೀ ಅವರು ಹೇಳಿದರು.
ಅವರು ಇಂದು ಕುಂದಾಪುರದ ಜಾಮಿಯಾ ಮಸೀದಿ ಸಭಾಂಗಣದಲ್ಲಿ ಮಿಲ್ಲತ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ವಿವಿಧ ಮದ್ರಸಾಗಳಿಂದ ಈ ವರ್ಷ ಪವಿತ್ರ ಕುರ್ಆನ್ನ ಸಂಪೂರ್ಣ ಹಿಫ್ಜ್ ಪೂರ್ಣಗೊಳಿಸಿದ 21 ಹುಫ್ಫಾಝ್-ಎ-ಕುರ್ಆನ್ರನ್ನು ಗೌರವಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಮೌಲಾ ಅವರು ಮಾತನಾಡಿ, ಅಲ್ಲಾಹ್ನ ಪವಿತ್ರ ಪುಸ್ತಕವನ್ನು ಸಂರಕ್ಷಿಸುವ ಮಹತ್ತರ ಸೇವೆಗೆ ತಮ್ಮ ಜೀವನವನ್ನು ಅರ್ಪಿಸಿರುವ ಈ ಪುಣ್ಯಾತ್ಮರನ್ನು ಗೌರವಿಸುವ ಅವಕಾಶ ಲಭಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಪಿಜಿ ಜ್ಯುವೆಲ್ಲರ್ಸ್ನ ಮಾಲಕರಾದ ಎಸ್.ಎಂ. ಇರ್ಷಾದ್, ಉದ್ಯಮಿ ಶೇಖ್ ಹನೀಫ್ ಬಸ್ರೂರು, ಪುರಸಭೆ ಸದಸ್ಯರು ಹಾಗೂ ಜಮೀಯ್ಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಮುಜಾವರ್ ಅಬು ಮೊಹಮ್ಮದ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಝಫ್ರುಲ್ಲಾ ಹೊಡೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಹಾಫಿಝ್ ಎಸ್.ಎಂ. ಅಫ್ಫಾನ್ ಅವರ ಕುರ್ಆನ್ ಪಠಣದೊಂದಿಗೆ ಆರಂಭಗೊಂಡಿತು. ಅಹ್ಮದ್ ಸವೂದ್ ಖಲೀಫಾ ಅವರು ನಬೀ ಸ್ತುತಿ ಗೀತೆ (ನಾತ್ ಶರೀಫ್) ಹಾಡಿದರು. ಮಿಲ್ಲತ್ ಫೌಂಡೇಶನ್ ಅಧ್ಯಕ್ಷರಾದ ಮೌಲಾನಾ ಝಮೀರ್ ಅಹ್ಮದ್ ರಶಾದಿ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ಸಭೆಯ ಉದ್ದೇಶವನ್ನು ವಿವರಿಸಿ ಸ್ವಾಗತಿಸಿದರು. ಕಿರಿಮಂಜೇಶ್ವರದ ಜಾಮಿಯಾ ಮಸೀದಿಯ ಖತೀಬರಾದ ಮೌಲಾನಾ ಅಬ್ದುಲ್ ರಹ್ಮಾನ್ ನದ್ವೀ ಅವರು ಕಾರ್ಯಕ್ರಮ ನಿರೂಪಿಸಿದರು. ಧನ್ಯವಾದ ಹಾಗೂ ದುವಾದೊಂದಿಗೆ ಸಭೆ ಮುಕ್ತಾಯಗೊಂಡಿತು.





