ನೆಚ್ಚಿನ ರಾಜಕೀಯ ನಾಯಕ, ಸಿನಿಮಾ ನಟ-ನಟಿಯರ ಪ್ರೀತಿ, ಅಭಿಮಾನಕ್ಕಾಗಿ ಹಲವು ಅಭಿಮಾನಿಗಳು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡ ಉದಾಹರಣೆಗಳಿವೆ. ಅಭಿಮಾನ ತೋರಿಸಿಕೊಳ್ಳಲು ಅಭಿಮಾನಿಗಳು ನಾನಾ ಕಸರತ್ತು ನಡೆಸುತ್ತಾರೆ. ಇಲ್ಲೊಬ್ಬ ಅಭಿಮಾನಿ ತಮ್ಮ ಎದೆಯ ಮೇಲೆ ನೆಚ್ಚಿನ ನಾಯಕರಾದ ಅರಣ್ಯ, ಪರಿಸರ ಹಾಗೂ ಜೈವಿಕ ಖಾತೆ ಸಚಿವ ಈಶ್ವರ ಖಂಡ್ರೆ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.
ಬೀದರ್ ತಾಲೂಕಿನ ಕಮಠಾಣ ಶಿವಾಜಿ ಗಾಯಕವಾಡ ಎಂಬುವರು ತಮ್ಮ ಎದೆಯ ಎಡ ಭಾಗದ ಮೇಲೆ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.

ಟ್ಯಾಟೂ ಹಾಕಿಸಿಕೊಂಡ ಶಿವಾಜಿ ಗಾಯಕವಾಡ ಈದಿನ.ಕಾಮ್ ಜೊತೆಗೆ ಮಾತನಾಡಿ, “ಕಳೆದ ಹತ್ತು ವರ್ಷಗಳಿಂದ ನಾನು ಸಚಿವ ಈಶ್ವರ ಖಂಡ್ರೆಯವರ ಅಭಿಮಾನಿ, ಅಂದಿನಿಂದ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ಆಸೆಯಿತ್ತು. ಈಗ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ತೋರಿಸಿದ್ದೇನೆ. ಇಂದು ಕಮಠಾಣ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರನ್ನು ಭೇಟಿಯಾಗಿ ಟ್ಯಾಟೂ ತೋರಿಸಿದ್ದೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಮಸೀದಿಯತ್ತ ಬಾಣದ ಸನ್ನೆ; ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು
“ನಾನೊಬ್ಬ ಸಮಾಜ ಸೇವಕ, ಸಚಿವ ಈಶ್ವರ ಖಂಡ್ರೆ ಅವರು ನನ್ನ ಮತಕ್ಷೇತ್ರದವರು ಇಲ್ಲದಿದ್ದರೂ ಅವರ ಜನಪರ ಕೆಲಸಗಳು, ಜನರ ಸುಖ-ದುಃಖಗಳಲ್ಲಿ ಭಾಗಿಯಾಗಿ ಸ್ಪಂದಿಸುವ ಅವರ ಒಳ್ಳೆಯ ಗುಣಗಳನ್ನು ಮೆಚ್ಚಿ ಅಭಿಮಾನಿಯಾಗಿದ್ದೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆಯವರು ಗೆದ್ದೇ ಗೆಲ್ಲುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.





