ಬಸವಕಲ್ಯಾಣ ನಗರಸಭೆ ಅನುದಾನ ಹಣ ದುರ್ಬಳಕೆ ಮಾಡಿಕೊಂಡಿರುವ ಪೌರಾಯುಕ್ತ ರಾಜೀವ ಡಿ.ಬಣಕರ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ತಾಲೂಕು ಘಟಕದಿಂದ ಮಂಗಳವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಈ ಸಂಬಂಧ ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಡಾ.ರಮೇಶ ಅವರಿಗೆ ಸಲ್ಲಿಸಿದರು.
ಎಸ್ಸಿಪಿ-ಟಿಎಸ್ಪಿ ಹಾಗೂ ಇತರೆ ಯೋಜನೆಗಳ ಅನುದಾನ ದುರ್ಬಳಕೆ ಮಾಡಿರುವ ಪೌರಾಯುಕ್ತ ರಾಜೀವ ಬಣಕಾರ ಅವರ ಅವ್ಯವಹಾರದ ಬಗ್ಗೆ ತನಿಖೆ ಕೈಗೊಂಡು ಅಮಾನತುಗೊಳಿಸಬೇಕು
ʼನಗರದ ತ್ರಿಪುರಾಂತದ ಜಮೀನಿನಲ್ಲಿ ಅಕ್ರಮ ಖಾತೆ ನೋಂದಣಿ ಮಾಡಿದ್ದು ಕಂಡು ಬಂದಿದೆ. ಇಲ್ಲಿನ ಸರ್ವೆ ನಂ.266 ಜಾಗವು ಸರ್ಕಾರದ ಹೆಸರಿನಲ್ಲಿ ಇದ್ದರೂ ಇ-ಖಾತಾ ಮಾಡಿರುತ್ತಾರೆ. 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕೆಲಸ ನಿರ್ವಹಿಸದೆ ಹಣ ಪಡೆದುಕೊಂಡಿದ್ದಾರೆ. ಮುಖ್ಯ ರಸ್ತೆ ದುರಸ್ತಿ ಹೆಸರಲ್ಲಿ ಅನುದಾನ ದುರ್ಬಳಕೆ ಆಗಿದೆ. ಕೊಳವೆ ಬಾವಿ ದುರುಸ್ತಿಗೊಳಿಸದೆ ಬೋಗಸ್ ಬಿಲ್ ಪಡೆದಿರುತ್ತಾರೆ. ಅವರ ಕುಮ್ಮಕ್ಕಿನಿಂದ ಸಾರ್ವಜನಿಕ ಉದ್ಯಾನಗಳನ್ನು ಅತಿಕ್ರಮಿಸಲಾಗಿದೆʼ ಎಂದು ದೂರಿದ್ದಾರೆ.
ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನ, ಅಂಗವಿಕಲರ ಅನುದಾನದ ದುರ್ಬಳಕೆಯೂ ಆಗಿದೆ. ಈ ಬಗ್ಗೆ ವಿಚಾರಿಸಿದ ಪಕ್ಷದ ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಗಾರೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬೆದರಿಸುತ್ತಿದ್ದಾರೆ. ಅನೇಕ ಓಣಿಗಳಲ್ಲಿ ರಸ್ತೆ, ಚರಂಡಿಗಳಿಲ್ಲ. ಇಂಥ ಸಮಸ್ಯೆ ಬಗೆಹರಿಸಲು ವಿನಂತಿಸಿದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಶೀಘ್ರದಲ್ಲಿ ಪೌರಾಯುಕ್ತರನ್ನು ಅಮಾನತುಗೊಳಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ : ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು : ಸಚಿವ ಈಶ್ವರ ಖಂಡ್ರೆ ಕಂಬನಿ
ಬಿಎಸ್ಪಿ ತಾಲೂಕ ಅಧ್ಯಕ್ಷ ಶಂಕರ್ ಫುಲೆ ರಾಜ್ಯ ಕಾರ್ಯದರ್ಶಿ ಅಶೋಕ್ ಮಂಠಾಳಕರ ರಾಜ್ಯ ಕಾರ್ಯದರ್ಶಿಗಳಾದ ಜ್ಞಾನೇಶ್ವರ್ ಸಿಂಗಾರೆ, ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ,ಉ ಉಪಾಧ್ಯಕ್ಷ ಸಚಿನ್ ಗಿರಿ, ತಾಲೂಕು ಉಪಾಧ್ಯಕ್ಷರಾದ ರಮೇಶ್ ರಾಠೋಡ್, ಸಚಿನ್ ಕಾಂಬಳೆ ಸೇರಿದಂತೆ ಪ್ರಮುಖರಾದ ಮಕ್ಬುಲ್ ಸಾಬ್, ರವಿ ಉದಾತೆ, ಮಹಾದೇವ್ ಗಾಯಕವಾಡ, ಚಂದ್ರಶೀಲಾ ಗಾಯಕವಾಡ, ರಾಹುಲ ಖಂದಾರೆ, ಸಂತೋಷ ಲಾಧಾ, ಸಂದೀಪ ಮುಕಿಂದೆ ಮತ್ತಿತರರಿದ್ದರು.






