ಚಾಮರಾಜನಗರ ಗ್ರಾಮಾಂತರ ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಕಿಡಿಗೇಡಿಗಳು ನಿನ್ನೆ ಮಧ್ಯರಾತ್ರಿ ಬೌದ್ಧ ವಿಹಾರದ ಬಾಗಿಲ ಬೀಗ ಮುರಿದು ಬುದ್ಧ ಪ್ರತಿಮೆ ಭಗ್ನಗೊಳಿಸಿ, ಡಾ. ಬಿ.ಆರ್.ಅಂಬೇಡ್ಕರ ಭಾವಚಿತ್ರ ವಿರೂಪಗೊಳಿಸಿರುವ ಘಟನೆ
ವರದಿಯಾಗಿದೆ.
ಇತ್ತೀಚಿಗೆ ಮೈಸೂರಿನಾದ್ಯಂತ ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ್ದ ವಿಚಾರ ಮಾಸುವ ಮುನ್ನವೇ, ಚಾಮರಾಜನಗರದಲ್ಲಿ ಇಂತಹ ಘಟನೆ ಘಟಿಸಿರುವುದು ಗ್ರಾಮಸ್ಥರಿಗೆ ಬೇಸರ ತರಿಸಿದೆ. ಕಿಡಿಗೇಡಿಗಳು ಅಂಬೇಡ್ಕರ್ ಅವರನ್ನೇ ಗುರಿಯಾಗಿಸಿ ಮಲ ಎರಚುವುದು, ಫ್ಲೆಕ್ಸ್ ಹರಿಯುವುದು, ವಿರೂಪಗೊಳಿಸುವುದು ಹೆಚ್ಚಾಗಿದ್ದು, ಇಂತಹ ಕಿಡಿಗೇಡಿಗಳ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಆಗದಿರುವುದು ಶೋಚನಿಯ.

ಸಾಕಷ್ಟು ಬಾರಿ ಇಂತಹ ಘಟನೆ ನಡೆದಿದ್ದರೂ, ನಡೆಯುತ್ತಿದ್ದರು ಪೊಲೀಸರು ಕ್ರಮವಹಿಸದೆ ಇರುವುದರಿಂದ ಕಿಡಿಗೇಡಿಗಳಿಗೆ ಭಯವೇ ಇಲ್ಲದಂತಾಗಿದೆ. ಜ್ಯೋತಿಗೌಡನಪುರದಲ್ಲಿ ಬುದ್ಧ ಪ್ರತಿಮೆ ಹಾನಿಗೊಳಿಸಿ ನೀಚತನ ಮೆರೆದಿದ್ದಾರೆ. ಬೌದ್ಧ ವಿಹಾರದಲ್ಲಿದ್ದ ಅಂಬೇಡ್ಕರ್ ಭಾವಚಿತ್ರ, ಹೊರಗಿದ್ದ ಅಂಬೇಡ್ಕರ್ ಫ್ಲೆಕ್ಸ್ ಹರಿದು ವಿರೂಪಗೊಳಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.
ನಂಜನಗೂಡು ಶಾಸಕರಾದ ದರ್ಶನ್ ದೃವನಾರಾಯಣ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಸಮಾಜದ ಶಾಂತಿ, ಸೌಹಾರ್ದತೆ ಹಾಗೂ ಸಂವಿಧಾನದ ಮೌಲ್ಯಗಳ ಮೇಲೆ ನೇರ ದಾಳಿಯಾಗಿದೆ. ಪೊಲೀಸ್ ಇಲಾಖೆ ಕೃತ್ಯವೆಸಗಿದವರನ್ನು ಬಂಧಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರಿನಲ್ಲಿ ಅ.25 ರಂದು ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು-ನಮ್ಮ ಪಾತ್ರ’ ವಿಚಾರಗೋಷ್ಠಿ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮಸ್ಥರು ಅಂಬೇಡ್ಕರ್, ಬುದ್ಧ ಪ್ರತಿಮೆ, ಭಾವಚಿತ್ರ ಹಾನಿ ಮಾಡಿದವರ ಬಂಧಿಸಬೇಕು. ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





