ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಕೆದಿಲ-ಪನಡ್ಕ ರಸ್ತೆ ವಿವಾದ ಕೊನೆಗೂ ಇತ್ಯರ್ಥವಾಗಿದೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ರಾಜಿ ಮಾತುಕತೆಯಲ್ಲಿ ವಿವಾದ ಇತ್ಯರ್ಥಗೊಂಡಿದ್ದು, ಸುಮಾರು 12 ವರ್ಷಗಳಿಂದ ಇದ್ದ ವಿವಾದಕ್ಕೆ ತೆರೆ ಎಳೆಯಲಾಗಿದೆ.
ಈ ರಸ್ತೆಯು ಪ್ರಸನ್ನ ಭಟ್ ವಳಂಗಜೆ ಅವರ ಪಟ್ಡಾ ಜಾಗದಲ್ಲಿ ಸಾಗುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಜಾಗದ ತಕರಾರು ಅಡ್ಡಿಯಾಗಿತ್ತು. ಪಟ್ಟಾ ಜಾಗವಾದ ಕಾರಣ ರಸ್ತೆ ಬೇಡಿಕೆ ಫಲಾನುಭವಿಗಳಿಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಶಾಸಕರಲ್ಲಿ ಫಲಾನುಭವಿಗಳು ಮನವಿ ಮಾಡಿಕೊಂಡಿದ್ದರು. ವಿವಾದದ ಬಗ್ಗೆ ಮತ್ತು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವ ಬಗ್ಗೆ ಶಾಸಕರ ನೇತೃತ್ವದಲ್ಲಿ ಪಂಜಿಗುಡ್ಡೆ ಈಶ್ವರಭಟ್ ಹಾಗೂ ಕಾಂಗ್ರೆಸ್ ಮುಖಂಡ ಲೋಕೇಶ್ ಪಡ್ಡಾಯೂರು ಪ್ರಸನ್ನ ಭಟ್ ವಳಂಗಜೆಯವರಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ರಸ್ತೆ ನಿರ್ಮಾಣಕ್ಕೆ ಭಟ್ ಅವರು ಒಪ್ಪಿಗೆ ನೀಡಿದ್ದರು. ಆ ಬಳಿಕ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಇದೇ ರಸ್ತೆಯ ಕಾಂಕ್ರಿಟೀಕರಣಕ್ಕೆ ಶಾಸಕರು 5 ಲಕ್ಷ ರೂ. ಅನುದಾನವನ್ನೂ ಇರಿಸಿದ್ದಾರೆ.
ರಸ್ತೆ ವಿವಾದ ಇತ್ಯರ್ಥಗೊಂಡ ಸಂತಸದಲ್ಲಿ ರಸ್ತೆ ಫಲಾನುಭವಿಗಳಾದ ಸುಮಾರು 25 ಕುಟುಂಬಸ್ಥರು ಶಾಸಕ ಅಶೋಕ್ ರೈ ಮನೆಗೆ ಬಂದು ಕೃತಜ್ಞತಾ ಸಲ್ಲಿಕೆಗಾಗಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು, “12 ವರ್ಷಗಳಿಂದ ನಾವು ರಸ್ತೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಶಾಸಕರು ಇತ್ಯರ್ಥ ಮಾಡಿದ್ದಾರೆ. ನಾವು ಎಂದಿಗೂ ಈ ಸೇವೆಯನ್ನು ಮರೆಯಲಾರೆವು” ಎಂದು ಹೇಳಿದರು.
ಪುತ್ತೂರು ಶಾಸಕ ಆಶೋಕ ರೈ ಮಾತನಾಡಿ, “ರಸ್ತೆ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಖಾಸಗಿ ಜಾಗವಾದ ಕಾರಣ ಅಲ್ಲಿ ರಸ್ತೆ ಮಾಡುವುದು ಕಷ್ಟಸಾಧ್ಯವಾಗಿತ್ತು. ಜಾಗದ ಮಾಲೀಕ ಪ್ರಸನ್ನ ಭಟ್ ಅವರು ಜಾಗ ಬಿಟ್ಟುಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುಮಾರು 25 ಕುಟುಂಬಗಳಿಗೆ ಇದು ನೆರವಾಗಿದೆ. ಮುಂದಕ್ಕೆ ಈ ರಸ್ತೆಯನ್ನು ಅಭಿವೃದ್ದಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ, “ಶಾಸಕರು ಮಾಡಿದ ಪುಣ್ಯದ ಕೆಲಸ ಇದಾಗಿದ್ದು, ಬಡವರ ಮನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಇಷ್ಟು ವರ್ಷದಲ್ಲಿ ಹಲವು ಮಂದಿಯ ಬಳಿ ಅರ್ಜಿ ಹಾಕಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಾರಿ ಬೇಡಿಕೆ ಈಡೇರಿದೆ, ಮುಂದೆ ರಸ್ತೆಯನ್ನು ಶಾಸಕರು ಅಭಿವೃದ್ದಿ ಮಾಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಪುತ್ತೂರು | ಆಟೋ ಚಾಲಕನ ಮೇಲೆ ಸಂಚಾರಿ ಪೊಲೀಸರ ದರ್ಪ: ಆಟೋ ಚಾಲಕರ ಯೂನಿಯನ್ ಪ್ರತಿಭಟನೆ
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಗೌಡ ಪಡ್ಡೆಯೂರು, ಕೆದಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ವಿ ವಾಲ್ತಾಜೆ, ಪ್ರಸನ್ನ ಭಟ್ ವಳಂಗಜೆ, ಸಾಹುಲ್ ಹಮೀದ್ ಕುಕ್ಕಾಜೆ, ಪ್ರಮೋದ್ ಅಡ್ಡಯೂರು, ಹರೀಶ್ ಬಂಗೇರ ಪಡ್ಡೆಯೂರು, ಪ್ರಕಾಶ್ ಗೌಡ ನೆಕ್ಕಿಲಾಡಿ, ಸೀತಾರಾಮ ಭಟ್ ಬಡೆಕ್ಕಿಲ, ಶಶಾಂಕ್ ಬಡೆಕ್ಕಿಲ, ವೆಂಕಪ್ಪ ಗೌಡ ಪನಡ್ಕ, ವಾರಿಜ ತಿಮ್ಮಕ್ಕ ಪೂವಪ್ಪ, ದಿವಾಕರ ನಾಯ್ಕ, ಪೂರ್ಣಿಮಾ, ಯಶೋಧ, ವೆಂಕಪ್ಪ ರಾನ್ಯ, ಲಕ್ಷ್ಮಿ ಪನಡ್ಕ, ವನಿತ ವಲಂಕುಮೇರಿ ಇದ್ಧರು.





