ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಕಳೆದ 84 ದಿನಗಳಿಂದ ವಿಜಯಪುರದಲ್ಲಿ ಧರಣಿ ಕುಳಿತಿರುವ ಹೋರಾಟಗಾರರು ಪೇಮೆಂಟ್ ಗಿರಾಕಿಗಳು ಎಂದು ಹೇಳುವ ಮೂಲಕ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದು, ಕೂಡಲೇ ಅವರು ಹೋರಾಟಗಾರರಲ್ಲಿ ಕ್ಷಮೆ ಯಾಚಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ ಗಣಿಹಾರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹೋರಾಟದಲ್ಲಿ ಭಾಗವಹಿಸಿದ ಪಕ್ಷಾತೀತ ನಾಯಕರು, ಸ್ವಾಮೀಜಿಗಳು, ಬುದ್ಧಿಜೀವಿಗಳಿಗೆಲ್ಲ ಲಪೂಟರು ಎಂದು ಮಾತನಾಡಿ ಅವಮಾನ ಮಾಡಿರುವ ಯತ್ನಾಳರು ತಕ್ಷಣ ಜಿಲ್ಲೆಯ ಜನತೆಯಲ್ಲಿ ಕ್ಷಮೆಯಾಚಿಸಬೇಕು. ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಮಾಡಬೇಕು ಎಂದು ಹೋರಾಟ ನಡೆಸುತ್ತಿರುವವರು ಸಚಿವ ಶಿವಾನಂದ ಪಾಟೀಲರ ಮನೆಗೆ ಹೋಗಿ ಪೇಮೆಂಟ್ ಪಡೆಯುತ್ತಾರೆ ಎಂದು ಹೇಳುವ ನಿಮ್ಮ ಬಳಿ ದಾಖಲೆ ಇದ್ದರೆ ಬಹಿರಂಗಪಡಿಸಬೇಕು. ಯತ್ನಾಳರು ಬೇಕಾಬಿಟ್ಟಿ ಮಾತನಾಡಿ ಹೋರಾಟಗಾರರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಹಾಗೂ ಮಂತ್ರಿಗಳನ್ನು ಓಲೈಸಿ ಮೆಡಿಕಲ್ ಕಾಲೇಜನ್ನು ತಾನೇ ಪಡೆದುಕೊಳ್ಳಬೇಕು ಎಂದು ಯತ್ನಾಳ್ ಕುತಂತ್ರ ನಡೆಸಿದ್ದಾರೆ” ಎಂದು ಆರೋಪಿಸಿದರು.
“ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಇರುವ ಸಾಧಕ ಬಾಧಕಗಳ ಬಗ್ಗೆ ತಿಳಿಸಿ ಎಂದು ಸಿಎಂ ಅವರು ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಕಳಿಸಿದ್ದಾರೆ. ಶಿವಾನಂದ ಪಾಟೀಲರು ಸರ್ಕಾರಿ ಮೆಡಿಕಲ್ ಕಾಲೇಜಿನ ಪರ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಗೆ ವೈದ್ಯಕೀಯ ಕಾಲೇಜು ತರುವುದರಲ್ಲಿ ಯಾವುದೇ ಸಂಶಯ ಬೇಡ” ಎಂದರು.
ಮುಖಂಡ ಡಾ. ರವಿಕುಮಾರ ಬಿರಾದಾರ ಮಾತನಾಡಿ, “ಯತ್ನಾಳರು ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಮಾತನಾಡಿ, ಪೇಮೆಂಟ್ ಗಿರಾಕಿಗಳು ಎಂದಿರುವುದು ಖಂಡನೀಯ. ಹೋರಾಟಗಾರರೆಲ್ಲ ಮೊದಲಿನಿಂದ ಹಲವಾರು ವಿಚಾರಗಳಲ್ಲಿ ಹೋರಾಟ ಮಾಡಿದವರು. ಪ್ರಾಮಾಣಿಕರಾಗಿದ್ದಾರೆ. ಅಂಥವರಿಗೆ ಅವಮಾನಿಸಿದ್ದಕ್ಕಾಗಿ ತಕ್ಷಣ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.
ಮುಖಂಡ ಎಂಸಿ ಮುಲ್ಲಾ ಮಾತನಾಡಿ, “ಈ ಹೋರಾಟದಲ್ಲಿ ಎಲ್ಲಾ ಸಂಘಟನೆಗಳು, ಮಠಾಧೀಶರು ಭಾಗವಹಿಸಿದ್ದಾರೆ. ಅವರನ್ನು ಲಪೂಟರು ಎನ್ನುವ ನೀವೆಷ್ಟು ಲಪೂಟರು ಎಂದು ಸಿರಿಗೇಟು ನೀಡಿದರು. ಶಿಕ್ಷಣ ಹೋರಾಟಗಾರರಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅಧಿವೇಶನದಿಂದ ಬಂದ ಕೂಡಲೇ ನೀವು ಹೋದಲ್ಲಿ ಬಂದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ವಿಜಯಪುರ | ಪಂಚ ಗ್ಯಾರಂಟಿಗಳ ಕುರಿತು ಜನಜಾಗೃತಿ; ಎಲ್ಇಡಿ ಪ್ರದರ್ಶನ ವಾಹನಕ್ಕೆ ಚಾಲನೆ
ಹಿರಿಯ ಪತ್ರಕರ್ತ ಅನಿಲ ಹೊಸಮನಿ ಮಾತನಾಡಿ, “ಜಾತ್ಯತೀತ, ಧರ್ಮತೀತ ಹಾಗೂ ಪಕ್ಷಾತೀತವಾಗಿ 84 ದಿನಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ರಾಜಕೀಯ ಬೆರೆಸುವ ಉದ್ದೇಶದಿಂದ ಯತ್ನಾಳರು ಹೀಗೆ ಮಾತನಾಡಿದ್ದಾರೆ. ಶಿವಾನಂದ ಪಾಟೀಲರ ಮೇಲೆ ನೀವು ರಾಜಕೀಯ ಮಾಡಿಕೊಳ್ಳಿ. ಆದರೆ ಹೋರಾಟಗಾರರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವ ಕೆಲಸ ಮಾಡಬೇಡಿ” ಎಂದರು.
ಸುರೇಶ ಬಿಜಾಪುರ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆದಿದೆ. ಸಚಿವ ಎಂಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲರು ಸಿಎಂ ಅವರ ಮನವೊಲಿಸುತ್ತಿದ್ದಾರೆ. ಎರಡು ನೂರಕ್ಕೂ ಅಧಿಕ ಸಂಘಟನೆಗಳಿರುವ ಈ ಹೋರಾಟ ಸಮಿತಿ ಶಾಶ್ವತ ಹೋರಾಟ ಸಮಿತಿಯಾಗಲಿದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಅಕ್ರಂ ಮಾಶಾಳಕರ, ಫಯಾಜ್ ಕಲಾದಿಗಿ ಉಪಸ್ಥಿತರಿದ್ದರು.





