ಭಟ್ಕಳ: ಪಟ್ಟಣ ಪಂಚಾಯತ್ ಆಗಿ ಘೋಷಣೆಯಾದ ನಾಲ್ಕು ವರ್ಷಗಳ ನಂತರ ಮಂಕಿಯಲ್ಲಿ ನಡೆದ ಮೊದಲ ಮಹತ್ವದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಈ ಫಲಿತಾಂಶವು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕಮಲ ಪಾಳೆಯದಲ್ಲಿ ಸಂಭ್ರಮ ಮನೆಮಾಡಿದೆ. ಈ ಬಾರಿಯ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಮಾಜಿ ಸಚಿವ ಶಿವಾನಂದ ನಾಯ್ಕ ಅವರ ನಡುವಿನ ನೇರ ಪ್ರತಿಷ್ಠೆಯ ಕಣವಾಗಿತ್ತು. ಅಂತಿಮ ಫಲಿತಾಂಶ ಹೊರಬಿದ್ದಾಗ ಶಿವಾನಂದ ನಾಯ್ಕ ಅವರ ನಾಯಕತ್ವದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ ಜಯಭೇರಿ ಬಾರಿಸಿದೆ.
ಸಚಿವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್ಗೆ ಈ ಮಟ್ಟದ ಹಿನ್ನಡೆಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂಖ್ಯೆಗಳ ಲೆಕ್ಕಾಚಾರ: ಒಟ್ಟು 20 ವಾರ್ಡ್ಗಳ ಪೈಕಿ ಬಿಜೆಪಿಯು 12 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ. ಆಡಳಿತಾರೂಢ ಕಾಂಗ್ರೆಸ್ ಕೇವಲ 08 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಹೊನ್ನಾವರದ ಶರಾವತಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ರೈತರ ಸಂಕಷ್ಟದ ನಡುವೆ ಕೋಟಿ ವೆಚ್ಚದ ಉತ್ಸವ ಬೇಕಿತ್ತೇ?; ಜಿಲ್ಲಾಡಳಿತದ ವಿರುದ್ಧ ಶಾಸಕ ಭೀಮಣ್ಣ ನಾಯ್ಕ ಆಕ್ರೋಶ
ವಾರ್ಡ್ವಾರು ವಿಜೇತರ ವಿವರ:ಬಿಜೆಪಿಯಿಂದ ಜ್ಯೋತಿ ಸತೀಶ ಖಾರ್ವಿ (ವಾರ್ಡ್ 1), ಮೀನಾಕ್ಷಿ ಕೃಷ್ಣ ಹಸ್ಲರ (ವಾರ್ಡ್ 2), ಆನಂದ ಗಣಪತಿ ನಾಯ್ಕ (ವಾರ್ಡ್ 3), ಸವಿತಾ ಮಲ್ಲಯ್ಯ ನಾಯ್ಕ (ವಾರ್ಡ್ 7), ಪೀಟರ್ ಎಸ್. ರೊಡ್ರಿಗೀಸ್ (ವಾರ್ಡ್ 8), ಗೀತಾ ರಮಾಕಾಂತ ಹರಿಕಂತ್ರ (ವಾರ್ಡ್ 9), ಸತೀಶ ದೇವಪ್ಪ ನಾಯ್ಕ (ವಾರ್ಡ್ 11), ರೇಖಾ ಗಿರೀಶ ನಾಯ್ಕ (ವಾರ್ಡ್ 13), ನೇತ್ರಾವತಿ ಈಶ್ವರ ಗೌಡ (ವಾರ್ಡ್ 14), ರವಿ ಉಮೇಶ ನಾಯ್ಕ (ವಾರ್ಡ್ 15), ವಿಜಯಾ ಮೋಹನ ನಾಯ್ಕ (ವಾರ್ಡ್ 18) ಹಾಗೂ ಸವಿತಾ ಹನುಮಂತ ನಾಯ್ಕ (ವಾರ್ಡ್ 20) ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಪರವಾಗಿ ರೇಷ್ಮಾ ಫರ್ನಾಂಡಿಸ್ (ವಾರ್ಡ್ 4), ಮಹಮ್ಮದ್ ಸಿದ್ದಿಕ್ ಹಸನ್ ಬಾಪು (ವಾರ್ಡ್ 5), ರಹಮತುಲ್ಲಾ ಬೊಟ್ಲೇರ (ವಾರ್ಡ್ 6), ಗಜಾನನ ಬಾಲಯ್ಯ ನಾಯ್ಕ (ವಾರ್ಡ್ 10), ಸಂಜೀವ ಗಂಗಾಧರ ನಾಯ್ಕ (ವಾರ್ಡ್ 12), ಉಲ್ಲಾಸ ಅಂಗದ ನಾಯ್ಕ (ವಾರ್ಡ್ 16), ಉಷಾ ಕೃಷ್ಣ ನಾಯ್ಕ (ವಾರ್ಡ್ 17) ಮತ್ತು ವಿನಾಯಕ ಮೊಗೇರ (ವಾರ್ಡ್ 19) ಜಯಗಳಿಸಿದ್ದಾರೆ.
ಈ ಐತಿಹಾಸಿಕ ಗೆಲುವು ಮಂಕಿ ಪಟ್ಟಣ ಪಂಚಾಯತ್ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





