ಶಿರೂರಿನ ಕೆಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲೆ ರಜಾ ಸಂಧರ್ಭದಲ್ಲಿ ಉಡುಪಿ ಶಾಪಿಂಗ್ ಮುಗಿಸಿ ಬಸ್ಸಿನಲ್ಲಿ ಹಿಂದಿರುಗುವಾಗ ವಿದ್ಯಾರ್ಥಿಗಳ ಗುಂಪಿನಲ್ಲಿರುವ ಓರ್ವ ಹುಡುಗಿ ಹಿಂದೂ ಎಂದು ತಿಳಿದು ಕುಂದಾಪುರದಲ್ಲಿ ಮಹೇಶ್ ಎಂಬ ವ್ಯಕ್ತಿ ಸಾರ್ವಜನಿಕವಾಗಿ ಹಿಂದೂ ಹುಡುಗಿಗೆ ಅವಮಾನ ಮಾಡಿ ನೈತಿಕ ಪೋಲಿಸ್ ಗಿರಿ ಮಾಡಿರುವುದನ್ನು ಸಿಪಿಎಂ ಕುಂದಾಪುರ ತಾಲೂಕು ಸಮಿತಿ ಖಂಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಕಾರ್ಯದರ್ಶಿ ಚಂದ್ರಶೇಖರ ವಿ, ಅನ್ಯ ಧರ್ಮ ಎಂಬ ಕಾರಣಕ್ಕೆ ಒಂದೇ ಊರಿನ ಮಕ್ಕಳು ಒಟ್ಟಿಗೆ ಮಾತಾಡಬಾರದು ಮಾತನಾಡಿದರೆ ಲವ್ ಜಿಹಾದ್ ಎಂಬ ಪಟ್ಟ ಕಟ್ಟಿ ಅವರ ಬದುಕು ಹಾಳು ಮಾಡುವುದು ಸರಿಯಲ್ಲ.ಇಂತಹ ಘಟನೆಗಳು ಸರಿಯಲ್ಲ ಎಂದು ಕಂಡರೆ ಪೋಲಿಸ್ ಇಲಾಖೆ ಮೂಲಕ ಅವರ ಪೋಷಕರ ಜೊತೆ ವ್ಯವಹರಿಸಿ ಸರಿಪಡಿಸಬೇಕೆ ಹೊರತು ಸಾರ್ವಜನಿಕವಾಗಿ ಬೈಗುಳ ,ಹಲ್ಲೆ ಮಾಡುವುದು ಅನಾಗರಿಕ ವರ್ತನೆ ಆಗುತ್ತದೆ ಎಂದು ಹೇಳಿದ್ದಾರೆ.
ಶಾಸಕರು ಪ್ರಬುದ್ಧತೆಯಿಂದ ವರ್ತಿಸಲಿ – ಯಾವುದೇ ಸಾಕ್ಷಿ ಇಲ್ಲದೇ ಕಾಣದ ಶಕ್ತಿಗಳು ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡಲು ಹೊರಟಿದೆ ಎಂದು ಸಮಾಜದ ದಾರಿ ತಪ್ಪಿಸಿ ಅಶಾಂತಿ ಉಂಟು ಮಾಡಲು ಬೈಂದೂರು ಶಾಸಕರು ಹೊರಟಿರುವುದು ಸಮರ್ಥನೀಯವಲ್ಲ, ತಪ್ಪಿತಸ್ಥರನ್ನು ಬೆಂಬಲಿಸಿ ಕಾನೂನು ಕ್ರಮಕ್ಕೆ ಅಡ್ಡಿ ಪಡಿಸುವ ವರ್ತನೆ ಖಂಡನೀಯವಾಗಿದೆ ಶಾಸಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸಿಪಿಎಂ ಹೇಳಿದೆ.





