ಮುದ್ದೇಬಿಹಾಳ ಪಟ್ಟಣದ ಸ್ಮಶಾನ ಜಾಗವನ್ನು ಮರು ಸರ್ವೆ ಮಾಡಿ ಸ್ಮಶಾನ ಜಾಗದಲ್ಲಿನ ಅತಿಕ್ರಮಣ ಕಟ್ಟಡಗಳನ್ನು ತೆರವುಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ತಹಶೀಲ್ದಾರ್ ಕಾರು ಚಾಲಕನ ವಿರುದ್ಧ ಯುವಜನ ಸೇನಾ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
“ಪಟ್ಟಣದ ಸ್ಮಶಾನಘಟ್ಟ ಜಾಗದಲ್ಲಿ ಅತಿಕ್ರಮಣ ಕಟ್ಟಡ ಹಾಗೂ ಸರ್ಕಾರಿ ಜಾಗ 9 ರಿಜಿಸ್ಟರ್ನಲ್ಲಿ ದಾಖಲು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ತೆರವು ಕಾರ್ಯಾಚರಣೆ ಮಾಡುವಂತೆ ಸಂಘಟನೆಯಿಂದ ನಾಲತವಾಡ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಯಾವುದೇ ಕ್ರಮ ಜರುಗಿಸಿಲ್ಲ” ಎಂದು ದೂರಿದರು.
“ನಾಲತವಾಡ 615 ಸರ್ವೆ ನಂಬರಿನ ಸ್ಮಶಾನ ಜಾಗದಲ್ಲಿ ಅನೇಕರು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಸಿರುತ್ತಾರೆ. ಹಾಗೂ ಕೆಲವು ಜಾಗಗಳನ್ನು ಸಂಘ ಸಂಸ್ಥೆಗಳಿಗೆ ನೀಡಿದ್ದರು. ಇನ್ನು ಕೆಲವರಲ್ಲಿ ಸರ್ಕಾರದ ಕಟ್ಟಡಗಳಿವೆ. ಕೆಲವು ಜನ ಸ್ಮಶಾನ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ಅದನ್ನು ಸರ್ಕಾರಿ ಕಚೇರಿಗೆ ಬಾಡಿಗೆ ನೀಡಿದ್ದಾರೆ. ಸ್ಮಶಾನ ಜಾಗವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದೆಂದು ಕಂದಾಯ ಇಲಾಖೆಯ ನಿಯಮವಿದ್ದರೂ ಸರ್ಕಾರಿ ಜಾಗವನ್ನು ಹಿಂದಿನ ಗ್ರಾಮ ಪಂಚಾಯಿತಿಯಲ್ಲಿ ಹಣದ ಆಸೆಗೆ ಸರ್ವೆ ನಂಬರ್ 9 ರಿಜಿಸ್ಟರ್ನಲ್ಲಿ ಕಾನೂನುಬಾಹಿರ ನೋಂದಣಿ ಮಾಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ? ಸಿಐಟಿಯು 16ನೇ ರಾಜ್ಯ ಸಮ್ಮೇಳನ ಯಶಸ್ವಿ: ಶ್ರಮ ವಿರೋಧಿ ನೀತಿಗಳ ವಿರುದ್ಧ ಸ್ಫೂರ್ತಿದಾಯಕ ಹೋರಾಟ
“ಈ ವಿಷಯದ ಕುರಿತು ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಮುಖ್ಯ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಕೂಡ ಪ್ರಯೋಜನವಾಗಿಲ್ಲ. ಕೂಡಲೇ 615 ಸರ್ವೇ ನಂಬರ್ ಸ್ಮಶಾನ ಜಾಗವನ್ನು ಕಬಳಿಸಿರುವವರ ಮೇಲೆ ಕಾನೂನು ಕ್ರಮ ಜರುಗಿಸಿ ಆಕ್ರಮಿತ ಕಟ್ಟಡಗಳನ್ನು ತೆರವಿಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದ್ದಾರೆ.





