ಸತತ ಮಳೆಯಿಂದ ಈಗಾಗಲೇ ಹಾನಿಗೀಡಾಗಿರುವ ತೊಗರಿ ಬೆಳೆಗೆ ಇದೀಗ ಮಂಜಿನ ಕಾಟ ಶುರುವಾಗಿದೆ. ಮಳೆಯಿಂದ ತಪ್ಪಿಸಿಕೊಂಡು ಅಳಿದುಳಿದಿರುವ ತೊಗರಿಗೆ ಸದ್ಯ ಮಂಜು ಮುಸುಕಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವ ಭೀತಿಯಲ್ಲಿ ರೈತರಿದ್ದಾರೆ. ಇದು ಮೊದಲೇ ಬೆಳೆ ಹಾನಿ ಸಂಕಷ್ಟ ಅನುಭವಿಸುತ್ತಿರುವ ರೈತರನ್ನು ಮತ್ತಷ್ಟು ಅಧೀರರನ್ನಾಗಿಸಿದೆ.
ವಿಜಯಪುರ, ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಮಂಜಿನ ವಾತಾವರಣ ಆಳತ್ತರಕ್ಕೆ ಬೆಳೆದ ತೊಗರಿ ಗಿಡಗಳ ಮೇಲೆ ಸವಾರಿ ಮಾಡುವಂತೆ ಕಾಣುತ್ತಿದೆ. ಈಗಾಗಲೇ ಹೂಗಳು ನಳನಳಿಸುತ್ತಿದ್ದು, ಮೊಗ್ಗಿನೊಂದಿಗೆ ಕಾಯಿಗಳು ಕಾಣಿಸಿಕೊಳ್ಳುತ್ತಿವೆ. ಬೆಳಗಿನ ಜಾವ ತಾಪಮಾನ ಕಡಿಮೆಯಾದಾಗ ಬೀಳುವ ಮಂಜು ಹೂ ಮತ್ತು ಕಾಯಿಗಳ ಮೇಲೆ ಪರಿಣಾಮ ಬೀರುತ್ತದೆ. ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹೀಗಾಗಿ ತೊಗರಿಯು ಮೋಡ ಕವಿದ ವಾತಾವರಣ, ತುಂತುರು ಹನಿಗಳಿಂದಾಗಿ ರೋಗಗಳಿಗೆ ತುತ್ತಾಗಲಿದ್ದು, ಇಳುವರಿ ಕುಸಿಯುವ ಭೀತಿ ಎದುರಾಗಿದೆ.

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹೋಬಳಿ, ತಾಳಿಕೋಟಿ ತಾಲೂಕಿನಲ್ಲಿ ಅತಿ ಹೆಚ್ಚು ತೊಗರಿ ಬಿತ್ತನೆ ಮಾಡಲಾಗಿದೆ. ಮುದ್ದೇಬಿಹಾಳ ಹೋಬಳಿಯಲ್ಲಿ 15,200 ಹೆಕ್ಟೇರ್, ಡವಳಿಗಿ ಹೋಬಳಿಯಲ್ಲಿ 14,800 ಹೆಕ್ಟೇರ್ ಮತ್ತು ನಾಲತವಾಡ ಹೋಬಳಿಯಲ್ಲಿ 17,100 ಹೆಕ್ಟೇರ್ ಮತ್ತು ತಾಳಿಕೋಟೆ ತಾಲೂಕಿನಲ್ಲಿ ಅಂದಾಜು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಸದ್ಯ ಹಾನಿಗೀಡಾದ ತೊಗರಿ ಬೆಳೆಯ ಸಮೀಕ್ಷೆ ಕಾರ್ಯವೂ ನಡೆದಿದ್ದು, ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಮಂಜಿನ ವಾತಾವರಣಕ್ಕೆ ಇರುವ ಅಷ್ಟೋ ಇಷ್ಟೋ ಬೆಳೆ ಹಾಳಾಗಿ ಇಳುವರಿಗೆ ಹೊಡೆತ ಬೀಳುವ ಭೀತಿ ಹೆಚ್ಚಾಗಿದೆ. ನಸುಕಿನ ಜಾವದಿಂದ ಬೆಳಗ್ಗೆ 8ರವರೆಗೆ ಬೀಳುವ ಮಂಜು ರೈತರನ್ನು ನಿದ್ದೆಗೆಡುವಂತೆ ಮಾಡಿದೆ. ಈ ವರ್ಷವೂ ತೊಗರಿ ಕೈ ಕೊಡಲಿದೆ ಎನ್ನುತ್ತಾರೆ ಹಲವರು.
ಮಂಜಿನ ವಾತಾವರಣದಿಂದ ತೊಗರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮಂಜು ಬಿದ್ದ ಬೆನ್ನಲ್ಲೇ ಬಿಸಿಲು ಆವರಿಸುತ್ತದೆ. ಹೀಗಾಗಿ ಇಳುವರಿಗೆ ಕುಂಠಿತವಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ತಾಳಿಕೋಟೆ ಸಹಾಯಕ ಕೃಷಿ ನಿರ್ದೇಶಕ ಮಹೇಶ ಜೋಶಿ.

ನೆರಹಾವಳಿಗೆ ಸಿಕ್ಕು ಅನ್ನದಾತರ ಬದುಕು ಬೀದಿಗೆ ಬಿದ್ದಿದೆ. ಸಾಲ ಮಾಡಿ ಬಿತ್ತಿದ ಬೆಳೆ ಕೈಗೆ ಬರುವಷ್ಟರಲ್ಲಿ ಮಣ್ಣು ಪಾಲಾಗುತ್ತಿದೆ. ಮಹಾ ಮಳೆಯ ಪ್ರವಾಹಕ್ಕೆ ಬೆಳೆ ಹಾಳಾಗಿ ಹೋಗಿದೆ. ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಈ ಕುರಿತು ರೈತ ಮುಖಂಡ ಶಿವಾನಂದ ಗೌಂದಿ ಪ್ರತಿಕ್ರಿಯಿಸಿ, “ತೊಗರಿ ಬೆಳೆ ಮಂಜಿನಿಂದ ಸಂಪೂರ್ಣ ಹಾಳಾಗಿದೆ. ಒಂದು ಎಕರೆಗೆ 40 ರಿಂದ 50 ಸಾವಿರ ಖರ್ಚು ಮಾಡಿದ್ದೀವಿ. ಸಾಲ ತೀರಿಸುವುದು ಹೇಗೆ ಎಂದು ತೋಚದಾಗಿದೆ. ಸರ್ಕಾರ ಆದಷ್ಟು ಬೇಗ ರೈತರಿಗೆ ಪರಿಹಾರ ನೀಡಬೇಕು. ಈ ಭಾಗದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬೆಳೆ ತೊಗರಿಯೇ ಆಗಿರುವುದರಿಂದ ಭಾರಿ ಪ್ರಮಾಣದಲ್ಲಿ ಹಾಳಾಗಿದ್ದು, ಆತಂಕ ಹೆಚ್ಚು ಮಾಡಿದೆ. ತಾಲೂಕು ವ್ಯಾಪ್ತಿಯ ರೈತರಿಗೆ ಪ್ರತಿ ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆಗಳು ಹಾಳಾಗುತ್ತಿರುವುದರಿಂದ ಅನೇಕ ರೈತ ಕುಟುಂಬಗಳು ಕೃಷಿ ಸಾಲ ತೀರಿಸಲು ನಗರಗಳತ್ತ ದುಡಿಯಲು ಹೋಗುವುದು ಅನಿವಾರ್ಯವಾಗಿದೆ” ಎಂದರು.

ಇದನ್ನೂ ಓದಿ: ವಿಜಯಪುರ | ಬೆಳೆಹಾನಿ ಪರಿಹಾರಕ್ಕೆ ರೈತ ಸಂಘಟನೆಗಳ ಆಗ್ರಹ
ಸತತ ಮಳೆ ಮತ್ತು ಮಂಜಿನ ಪರಿಣಾಮದಿಂದ ವಿಜಯಪುರದಲ್ಲಿ ತೊಗರಿ ಬೆಳೆ ಹಾನಿಯ ಭೀತಿ ಗಂಭೀರವಾಗಿದೆ. ಹೂ, ಮೊಗ್ಗು, ಕಾಯಿಗಳು ನಾಶವಾಗುತ್ತಿರುವುದು, ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತಿರುವುದು ಮತ್ತು ರೋಗಗಳ ಹರಡುವ ಸಾಧ್ಯತೆ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸುಮಾರು 52,000 ಹೆಕ್ಟೇರ್ ವ್ಯಾಪ್ತಿಯ ತೊಗರಿ ಬೆಳೆ ಹಾನಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ರೈತರು ತಕ್ಷಣ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಸ್ವಾಭಾವಿಕ ಪ್ರಾಕೃತಿಕ ಪರಿಸ್ಥಿತಿಗಳು, ಹಳೆ ಮತ್ತು ಹೊಸ ತೊಗರಿ ಬೆಳೆಗಾರರಿಗೂ ಸಂಕಷ್ಟ ಹಾಗೂ ಆರ್ಥಿಕ ಹೊಡೆತ ತರುತ್ತಿದ್ದು, ಸುಧಾರಿತ ಹವಾಮಾನ-ವೀಕ್ಷಣಾ ವ್ಯವಸ್ಥೆ ಮತ್ತು ತುರ್ತು ಬೆಳೆ ರಕ್ಷಣಾ ಕ್ರಮಗಳ ಅಗತ್ಯವನ್ನು ಒತ್ತಿ ಸೂಚಿಸಿದೆ.





