ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿಸಲು ಹಾಗೂ ಬಲಪಡಿಸಲು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಪಕ್ಷದ ಕಷ್ಟದ ಕಾಲದಲ್ಲೂ ತ್ಯಾಗ ಮತ್ತು ಸತ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದ ಗೌರವ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಸಿ ಎಸ್ ನಾಡಗೌಡ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ ಆಗ್ರಹಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ನಾಯಕರಿಗೆ ಸಚಿವ ಸ್ಥಾನ ನೀಡಲೇಬೇಕು. ಸಿಎಸ್ ನಾಡಗೌಡರ ರಾಜಕೀಯ ಜೀವನ ಶುದ್ಧ ಮತ್ತು ಪ್ರಾಮಾಣಿಕತೆ ಮಾದರಿಯಾಗಿದೆ. ತಾಲೂಕಿನ ಅಭಿವೃದ್ಧಿಗೆ ಅವರು ಅನೇಕ ಯೋಜನೆಗಳನ್ನು ತರಿಸಿದ್ದು,ರಸ್ತೆ, ವಿದ್ಯುತ್, ನೀರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶಾಶ್ವತ ಬದಲಾವಣೆ ತಂದಿದ್ದಾರೆ. ಇಂತಹ ಜನಪ್ರಿಯ ನಾಯಕರಿಗೆ ಸಚಿವ ಸ್ಥಾನ ದೊರೆತರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯುತ್ತದೆ” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮುದ್ದೇಬಿಹಾಳ | ಆಯತಪ್ಪಿ ಕಾಲುವೆಗೆ ಬಿದ್ದ ಯುವತಿ; ರಕ್ಷಿಸಲು ಹೋದ ಸಹೋದರರೂ ನೀರುಪಾಲು
ನಾಡಗೌಡರ ಹೋರಾಟ ಮನೋಭಾವ ಮತ್ತು ಜನಪರ ನೆರವುಗಳಿಂದ ಯುವ ನಾಯಕರಿಗೆ ಪ್ರೇರಣೆ ದೊರೆಯುತ್ತದೆ. ಗ್ರಾಮ ಮಟ್ಟದಿಂದಲೂ ಜನರು ಅವರ ಹೆಸರಿನಲ್ಲಿ ವಿಶ್ವಾಸ ಹೊಂದಿದ್ದಾರೆ. ಪಕ್ಷದ ಉನ್ನತ ನಾಯಕತ್ವ ಈ ಭಾವನೆ ಗೌರವಿಸಿ ಸಚಿವ ಸ್ಥಾನ ನೀಡಬೇಕು. ಇದು ಕಾಂಗ್ರೆಸ್ ಪಕ್ಷದ ಬಲವರ್ದನೆಗೆ ಸಹಕಾರಣವಾಗುತ್ತದೆ. ತಾಲೂಕಿನ ಹಲವಾರು ಹಿರಿಯ ಕಾಂಗ್ರೆಸ್ ಮುಖಂಡರು, ಯುವ ನಾಯಕರು ಮತ್ತು ಕಾರ್ಯಕರ್ತರು ಸಹ ನಾಡಗೌಡರಿಗೆ ಸಚಿವ ಸ್ಥಾನ ನೀಡುವ ಒತ್ತಾಯ ವ್ಯಕ್ತಪಡಿಸಿದ್ದು, ಜಿಲ್ಲಾ ಮಟ್ಟದಲ್ಲಿ ಸಹ ಬೆಂಬಲ ಅಭಿಯಾನ ಆರಂಭವಾಗಿದೆ. ನಾಡಗೌಡರಿಗೆ ನ್ಯಾಯ ನ್ಯಾಯ ಸಿಗಲಿ ಎಂಬ ಘೋಷಣೆಯೊಂದಿಗೆ ಕಾರ್ಯಕರ್ತರು ಸಹಿ ಅಭಿಯಾನ, ಪೋಸ್ಟರ್ ಅಭಿಯಾನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಅಭಿಯಾನ ಶೀಘ್ರದಲ್ಲೇ ಆರಂಭಿಸಲಿದ್ದಾರೆ ಎಂದು ತಿಳಿಸಿದರು.





