ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿಯ ಮೊದಲ ಅವಧಿಯ ಉಳಿದ 15 ತಿಂಗಳ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮಾಜದವರಿಗೆ ನೀಡಬೇಕು ಎಂದು ಯುವ ಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಲತವಾಡ ಪಟ್ಟಣ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಮುಸ್ಲಿಂ ಸಮುದಾಯ ನಿರ್ಣಾಯಕ ಪಾತ್ರ ವಹಿಸಿದೆ. ಕೇವಲ ಮತದಾನದಲ್ಲಷ್ಟೇ ಅಲ್ಲದೆ, ಚುನಾವಣೆಯ ಪ್ರತಿ ಹಂತದಲ್ಲೂ ಪಕ್ಷದ ಕಾರ್ಯಚಟುವಟಿಕೆಗಳಿಗೆ ಮುಸ್ಲಿಂ ಸಮಾಜ ಸಂಪೂರ್ಣ ಬೆಂಬಲ ನೀಡಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ರಾಜಕೀಯ ಪ್ರತಿನಿಧಿತ್ವ ನೀಡುವುದು ಅವಶ್ಯಕತೆಯಷ್ಟೇ ಅಲ್ಲ, ಸಾಮಾಜಿಕ ನ್ಯಾಯದ ಪ್ರತಿಬಿಂಬವೂ ಆಗಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಮುಸ್ಲಿಂ ಸಮಾಜದ ನಾಯಕತ್ವ ಸಕಾರಾತ್ಮಕ ಮತ್ತು ಪರಿಣಾಮಕಾರಿ ಪಾತ್ರ ವಹಿಸಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಪಂಚ ಗ್ಯಾರಂಟಿಗಳ ಕುರಿತು ಜನಜಾಗೃತಿ; ಎಲ್ಇಡಿ ಪ್ರದರ್ಶನ ವಾಹನಕ್ಕೆ ಚಾಲನೆ
“ನಾಲತವಾಡದ ಸಮಗ್ರ ಅಭಿವೃದ್ಧಿ, ಶಾಂತಿ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಎಲ್ಲ ಸಮುದಾಯಗಳ ಸಹಕಾರ ಅಗತ್ಯವಾಗಿದ್ದು, ಮುಸ್ಲಿಂ ಸಮಾಜಕ್ಕೆ ಅವಕಾಶ ನೀಡುವುದರಿಂದ ರಾಜಕೀಯದಲ್ಲಿ ಸಮಾನತೆ ಮತ್ತು ವಿಶ್ವಾಸ ಮತ್ತಷ್ಟು ಬಲಗೊಳ್ಳಲಿದೆ. ರಾಜ್ಯ ಹಾಗೂ ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಸ್ಲಿಂ ಸಮಾಜ ಮಹತ್ವದ ಪಾತ್ರ ವಹಿಸಿದೆ. ನಾಲತವಾಡ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿಯೂ ಒಗ್ಗಟ್ಟಿನಿಂದ ಮತದಾನ ಮಾಡಿ ಪಕ್ಷದ ಗೆಲುವಿಗೆ ಕಾರಣವಾಗಿದ್ದಾರೆ. ಆದ್ದರಿಂದ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಪಕ್ಷದ ನೈತಿಕ ಕರ್ತವ್ಯವಾಗಿದೆ. ಹೀಗಾಗಿ, ನಾಲತವಾಡ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮಾಜ ಕೈ ನೀಡುವಂತೆ ಸಂಬಂಧಿಸಿದ ಶಾಸಕರು ಹಾಗೂ ಪಕ್ಷದ ನಾಯಕರು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.





