ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ನಡೆಯುತ್ತಿದ್ದ ಹೋರಾಟ ಅಂತ್ಯ ಕಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ನೇತೃತ್ವದಲ್ಲಿ ಶುಕ್ರವಾರ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಕಬ್ಬು ಬೆಳೆಗಾರರ ಮುಖಂಡರ ಜೊತೆ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಶುಕ್ರವಾರ ಸಂಜೆ ಹೋರಾಟ ಅಂತ್ಯವಾಗಿದೆ.
ಸಂಧಾನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು ಮೊದಲನೇ ಕಂತಿನ ಬಿಲ್ ರೂ.3200 ಕೊಡಬೇಕು. ಕಬ್ಬಿನ ರಿಕವರಿ ಆಧಾರದ ಮೇಲೆ ದರ ನೀಡದೆ ಏಕರೂಪ ಬೆಲೆ ಕೊಡಬೇಕು. ಎರಡನೇ ಕಂತಿನ ಬಿಲ್ನಲ್ಲಿ ಟನ್ಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಹಾಗೂ ಕಾರ್ಖಾನೆ ಅವರ ಐವತ್ತು ರೂ ಕೊಡಬೇಕು ಎಂದು ಸಂಧಾನ ಸಭೆಯಲ್ಲಿ ನಿರ್ಣಯಿಸಲಾಯಿತು. ಇದಕ್ಕೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರು ಒಪ್ಪಿಗೆ ನೀಡಿದ್ದಾರೆಂದು ಹೇಳಿದ ಅವರು, ಮುಧೋಳ ನಿರಾಣಿ ಶುಗರ್ಸ್, ಸಮೀರವಾಡಿ ಗೋದಾವರಿ ಸುಗರ್ಸ್, ಊತ್ತೂರಿನ ಐಸಿಪಿಎಲ್ ಸುಗರ್ಸ್, ಸಿದ್ದಾಪುರದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
“ಈ ನಾಲ್ಕು ಕಾರ್ಖಾನೆಯವರು ರೈತರ ರೂ 125 ಕೋಟಿ ಬಾಕಿ ಉಳಿಸಿಕೊಂಡಿದ್ದು, ಈ ಪೈಕಿ ಈಗಾಗಲೇ ನೂರು ಕೋಟಿ ಬಾಕಿ ಹಣ ನೀಡಿದ್ದಾರೆ. 25 ಕೋಟಿ ಹಣವನ್ನು ವಾರದೊಳಗೆ ನೀಡುವುದಾಗಿ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಎಚ್ಎನ್ಟಿ ಬಾಕಿ ಹಣ ಪೂರ್ಣ ಪ್ರಮಾಣದಲ್ಲಿ ಜಮಾ ಆಗಿದೆ” ಎಂದು ಮಾಹಿತಿ ನೀಡಿದರು.
“ಈ ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಪ್ರತಿ ಟನ್ ಗೆ 350 ನೀಡಿದಂತೆ, ಪ್ರಸಕ್ತ ಸಾಲಿಗೆ ಪ್ರತಿ ಟನ್ಗೆ ರೂ.50 ನೀಡಲಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಯಾವತ್ತೂ ರೈತ ಪರವಾಗಿದೆ ಎಂಬದನ್ನು ಸಾಬೀತುಪಡಿಸಿದೆ. ಎಫ್ ಆರ್ ಪಿ ಹಾಗೂ ಕಬ್ಬಿನ ಉಪ ಉತ್ಪನ್ನಗಳ ಮೇಲೆ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಕಬ್ಬಿಗೆ ಎಫ್ ಆರ್ ಪಿ ಬೆಲೆ ನಿಗದಿ ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ, ಪ್ರಧಾನಿಗಳು ಔಹಾನ ನೀಡಿದ ತಕ್ಷಣ ದೆಹಲಿಗೆ ತೆರಳಿ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವ ಕುರಿತು ಚರ್ಚಿಸಲಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಮುಧೋಳ | ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ; 20 ಟ್ರ್ಯಾಕ್ಟರ್ಗಳಿಗೆ ಬೆಂಕಿ
ಕಬ್ಬು ಹೋರಾಟಗಾರರ ಮುಖಂಡ ಬಸವಂತಪ್ಪ ಕಾಂಬಳೆ, ಈರಪ್ಪ ಹಂಚಿನಾಳ, ಸುಭಾಸ್ ಸಿರಬೂರ, ದುಂಡಪ್ಪ ಹರಗಟ್ಟಿ, ಮುತ್ತಪ್ಪ ಕೋಮಾರ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕಬ್ಬು ಬೆಳೆಗಾರರ ಪರವಾಗಿ ಒಪ್ಪಿಗೆ ಸೂಚಿಸಿದ್ದೇವೆ. ಶುಕ್ರವಾರದಿಂದಲೇ ರೈತರು ಕಬ್ಬು ಕಳಿಸಲು ತಿಳಿಸಿದ್ದೇವೆ. ಕಾರ್ಖಾನೆಯವರು ಕಬ್ಬುನುರಿಸುವ ಕಾರ್ಯ ಆರಂಭಿಸಬೇಕೆಂದು ಹೇಳಿದ್ದೇವೆ. ಈ ಕುರಿತು ಕಾರ್ಖಾನೆಯವರು ಮುಚ್ಚಳಿಕೆ ಪತ್ರ ಬರೆದು ಕೊಡಬೇಕೆಂದು ತಿಳಿಸಿದ್ದೇವೆ. ಕಬ್ಬು ಪೂರೈಸಿ 14 ದಿನದೊಳಗಾಗಿ ಕಬ್ಬಿನ ಬಿಲ್ ನೀಡುವಂತೆ ಒಪ್ಪಂದ ಮಾಡಿಕೊಂಡಿದ್ದೇವೆ. ಒಟ್ಟಾರೆ ಇದು ರೈತರ ಹೋರಾಟಕ್ಕೆ ಚಿಕ್ಕ ಜಯ” ಎಂದು ತಿಳಿಸಿದರು.
ಸಂಧಾನ ಸಭೆಯಲ್ಲಿ ಡಿಸಿ, ಎಸ್ಪಿ, ಸಿ ಇ ಒ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.





