ಮುಂಡಗೋಡ: ಕಳೆದ ಕೆಲವು ದಿನಗಳಿಂದ ತೀವ್ರ ಬೇಸಿಗೆಯ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮುಂಡಗೋಡ ತಾಲ್ಲೂಕಿನ ಜನತೆಗೆ ವರುಣದೇವ ತಂಪು ಎರೆದಿದ್ದಾನೆ.
ಆದರೆ, ಮಳೆಯೊಂದಿಗೆ ಬೀಸಿದ ಭಾರಿ ಗಾಳಿಯ ಆರ್ಭಟಕ್ಕೆ ಮುಂಡಗೋಡ ತಾಲ್ಲೂಕಿನ ಪಾಳಾದಿಂದ ಹಾನಗಲ್ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬೃಹತ್ ಮಾವಿನ ಮರವೊಂದು ರಸ್ತೆಯ ಮಧ್ಯಭಾಗದಲ್ಲೇ ಮರ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ದಾರಿಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಇನ್ನು ಜೋರಾದ ಗಾಳಿಗೆ ಬಿದ್ದ ಬೃಹತ್ ಮಾವಿನ ಮರದ ಕೊಂಬೆಗಳನ್ನು ಸೌದೆಗಾಗಿ ಕೊಂಡೊಯ್ಯಲು ಸ್ಥಳೀಯರು ಮುಗಿಬಿದ್ದರು. ಅಡುಗೆ ಅನಿಲದ (ಸಿಲಿಂಡರ್) ಕೊರತೆ ಎದುರಿಸುತ್ತಿರುವ ಜನತೆ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಕಟ್ಟಿಗೆ ಸಂಗ್ರಹಿಸಲು ಪೈಪೋಟಿಗೆ ಇಳಿದ ದೃಶ್ಯ ಕಂಡುಬಂತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | LPG ಸಿಲಿಂಡರ್ ಅಭಾವ; ಗೃಹಿಣಿಯರ ನೆಮ್ಮದಿಗೆ ಭಂಗ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ಯಂತ್ರಗಳ ಸಹಾಯದಿಂದ ಕತ್ತರಿಸಿ ತೆರವುಗೊಳಿಸಿದರು. ತದನಂತರ ವಾಹನ ಸಂಚಾರ ಎಂದಿನಂತೆ ಸುಗಮವಾಗಲು ದಾರಿ ಮಾಡಿಕೊಟ್ಟರು. ಅರಣ್ಯ ಇಲಾಖೆಯ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.





