ಮುಂಡಗೋಡ ತಾಲೂಕಿನ ಪಾಳಾದ ಅಂಬೇಡ್ಕರ್ ಸಭಾಭವನದಲ್ಲಿ 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಮತ್ತು ಮಾವು ಬೆಳೆಗಾರರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಅಡಿಕೆಯಲ್ಲಿ ಕಂಡುಬರುತ್ತಿರುವ ಎಲೆ ಚುಕ್ಕೆ ರೋಗ ಹಾಗೂ ಮಾವು ಬೆಳೆಗೆ ಬಾಧಿಸುವ ವಿವಿಧ ಕೀಟ ಮತ್ತು ರೋಗಗಳ ನಿರ್ವಹಣೆಯ ಕುರಿತು ಈ ವಿಚಾರ ಸಂಕಿರಣದಲ್ಲಿ ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಂಡಗೋಡ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಕೃಷ್ಣ ಟಿ. ಕುಳ್ಳೂರ ಅವರು, ಮುಂಡಗೋಡ ತಾಲೂಕಿನಾದ್ಯಂತ ಸುಮಾರು 3,900 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಕೊಳೆ ರೋಗ ಮತ್ತು ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ರೈತರಿಗೆ ಆಧುನಿಕ ತಂತ್ರಜ್ಞಾನ ಹಾಗೂ ಸುಧಾರಿತ ಬೇಸಾಯ ಪದ್ಧತಿಗಳ ಬಗ್ಗೆ ಅರಿವು ಮೂಡಿಸಲು ಕ್ಷೇತ್ರ ಮಟ್ಟದಲ್ಲಿ ತಜ್ಞರ ಮೂಲಕ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಅಡುಗೆ ಅನಿಲ (ಗ್ಯಾಸ್) ಕೊರತೆ ಇಲ್ಲ: ಆತಂಕ ಬೇಡ ಎಂದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಕೃಷಿ ವಿಜ್ಞಾನಿ ಡಾ. ಮೃತ್ಯುಂಜಯ ಕಿತ್ತೂರಮಠ ಅವರು ಮಾತನಾಡಿ ಮಾವು ಬೆಳೆಗೆ ಬರುವ ರೋಗಗಳು ಮತ್ತು ಕೀಟಬಾಧೆಗಳನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ರೈತರಿಗೆ ಸವಿಸ್ತಾರವಾಗಿ ವಿವರಿಸಿದರು. ಸಿದ್ಧಾಪುರದ ವಿಷಯ ತಜ್ಞರಾದ ಶ್ರೀ ಮಯೂರ ಪಾಟೀಲ ಅವರು ಅಡಿಕೆ ಬೆಳೆಯನ್ನು ಬಾಧಿಸುವ ರೋಗಗಳ ಹತೋಟಿ ಮತ್ತು ಕೀಟಬಾಧೆ ತಡೆಗಟ್ಟುವ ಕುರಿತು ತಾಂತ್ರಿಕ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಗೌಡ ಶಿವನಗೌಡ್ರ, ಪಾಳಾ ಎಫ್ಪಿಒ (FPO) ಅಧ್ಯಕ್ಷರಾದ ಶ್ರೀ ರಮೇಶ ಜಿಗಳೇರ, ಸೋಮಣ್ಣ ಮಟ್ಟಿಮನಿ, ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀ ರಾಮಪ್ಪ ನಡುವಿನಮನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 50ಕ್ಕೂ ಹೆಚ್ಚು ಪ್ರಗತಿಪರ ಅಡಿಕೆ ಮತ್ತು ಮಾವು ಬೆಳೆಗಾರರು ಭಾಗವಹಿಸಿದ್ದರು.





