ಮುಂಡಗೋಡ ತಾಲೂಕಿನ ನಂದಿಗಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಹೊಂಡ ಗ್ರಾಮದಲ್ಲಿ ಯುವರತ್ನ ಯುವ ಒಕ್ಕೂಟ ಮತ್ತು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮದ ಜನರಲ್ಲಿ ಸಂವಿಧಾನದ ಮೌಲ್ಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ ಹರಿಜನ ಮತ್ತು ಮಾರುತಿ ದುಮಾಲ ಅವರು, ಸಂವಿಧಾನದ ಮಹತ್ವವನ್ನು ವಿವರಿಸಿದರು. ಸಂವಿಧಾನದಲ್ಲಿನ ಪ್ರತಿಯೊಂದು ಅಂಶವನ್ನೂ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಅಲ್ಲದೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರು ಮೂಲಭೂತ ತತ್ವಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ದಾರಿಯಲ್ಲಿ ನಾವು ನಡೆಯಬೇಕು ಎಂದು ತಿಳಿಸಿದರು.
ಸಂತ ಅಲೋಸಿಯಸ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಸುಬ್ರಮಣ್ಯ ಅವರು ಸಂವಿಧಾನ ದಿನದ ಕುರಿತು ಜನರಿಗೆ ಅರಿವು ಮೂಡಿಸಿದರೆ, ಮತ್ತೊಬ್ಬ ವಿದ್ಯಾರ್ಥಿನಿ ಅಂಬಿಕಾ ಅವರು ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು. ಲೊಯೋಲ ವಿಕಾಸ ಕೇಂದ್ರದ ಕಾರ್ಯಕರ್ತರಾದ ಡಿಮ್ನ ಅವರು ಸಂವಿಧಾನದ ಪ್ರಸ್ತಾವನೆಯನ್ನು ಮಂಡಿಸಿ, ಸಂವಿಧಾನದ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಸಮುದಾಯದವರಿಗೆ ಮನದಟ್ಟು ಮಾಡಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ಕಾರವಾರ | ಮಾದಕ ವಸ್ತು ನಿಷೇಧಿಸಿದ್ದಕ್ಕೆ ಪ್ರತೀಕಾರ: ಜೈಲರ್ ಸೇರಿ 3 ಸಿಬ್ಬಂದಿ ಮೇಲೆ ರೌಡಿಗಳ ಮಾರಣಾಂತಿಕ ಹಲ್ಲೆ!
ಕಾರ್ಯಕ್ರಮದಲ್ಲಿ ಅಲೋಸಿಯಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮದ ಮಕ್ಕಳು ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು. ಯುವಕರು ಸಾಂಪ್ರದಾಯಿಕ ಕೋಲಾಟ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮೈಲಾರಿ ಹಡಪದ, ಸದಸ್ಯರಾದ ಬಸವರಾಜ ಅಂಬಿಗೇರ, ನಾಗೇಂದ್ರ ಹರಿಕಾರ, ಹಾಗೂ ಗ್ರಾಮದ ಹಿರಿಯರಾದ ಉಳ್ಳೆಪ್ಪಾ ಅಲ್ಲಾಪುರ ಭಾಗವಹಿಸಿದ್ದರು. ಇದರ ಜೊತೆಗೆ, ಸಂತ ಅಲೋಸಿಯಸ್ ಕಾಲೇಜಿನ ಎಂ.ಎಸ್ಸಿ. ಫುಡ್ ಅಂಡ್ ಸೈನ್ಸ್ ವಿದ್ಯಾರ್ಥಿಗಳು ಹಾಗೂ ಊರಿನ ಹಿರಿಯರು ಮತ್ತು ಸಮುದಾಯದ ಜನರು ಪಾಲ್ಗೊಂಡಿದ್ದರು





