ಮುಂಡಗೋಡ: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆ ಮುಂಡಗೋಡ ತಾಲ್ಲೂಕಿನಾದ್ಯಂತ ಭೂಮಿಯ ಒಡಲನ್ನು ಬೇಯಿಸುವ ಇಟ್ಟಿಗೆ ಭಟ್ಟಿಗಳ ಜಾಲ ಮತ್ತೆ ಸಕ್ರಿಯಗೊಳ್ಳುತ್ತಿದೆ. ತಾಲ್ಲೂಕಿನ ಸನವಳ್ಳಿ, ರಾಮಾಪುರ, ಹನುಮಾಪುರ, ಕೆಂದಲಗೇರಿ, ಅಟ್ಟಣಗಿ, ಚವಡಳ್ಳಿ-ಮಳವಳ್ಳಿ, ಓಣಿಕೇರಿ, ಒರಲಗಿ, ಲಕ್ಕೊಳ್ಳಿ, ಸೇರಿದಂತೆ ಇನ್ನೂ ಕೆಲವು ಗ್ರಾಮಗಳಲ್ಲಿ ಇಟ್ಟಿಗೆ ಸುಡಲು ಭಟ್ಟಿಗಳು ತಯಾರಾಗುತ್ತಿವೆ.
ಆದರೆ, ವಿಷಾದದ ಸಂಗತಿಯೆಂದರೆ ಇವುಗಳಲ್ಲಿ ಬಹುಪಾಲು ಭಟ್ಟಿಗಳು ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ಪರಿಸರ ಸಂರಕ್ಷಣಾ ನಿಯಮಗಳನ್ನು ಹಾಗೂ ಸರ್ಕಾರದ ಕಾನೂನುಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿವೆ. ತಾಲೂಕಿನಲ್ಲಿ ಅಂದಾಜಿನ ಪ್ರಕಾರ 100ರ ಮೇಲೆ ಇಟ್ಟಿಗೆ ಭಟ್ಟಿಗಳು ಇದ್ದರು ಕಾನೂನುಬದ್ಧವಾಗಿ ಪರವಾನಗಿ ಪಡೆದು ನಡೆಸುತ್ತಿರುವ ಇಟ್ಟಿಗೆ ಭಟ್ಟಿಗಳು ಬೆರಳೆಣಿಕೆಯಷ್ಟು ಇಲ್ಲ, ಸುಮಾರು ಭಟ್ಟಿಗಳಿಗೆ ಕಮರ್ಷಿಯಲ್ ಜಾಗದ ಸಮಸ್ಯೆ, ಆರ್ಥಿಕ ಅಡಚಣೆ ಮತ್ತು ಸರಿಯಾದ ಮಾಹಿತಿಯ ಕೊರತೆಯಿಂದ, ಪರವಾನಿಗೆ ಮಾಡಿಸಿದೆ ನಿಯಮಗಳನ್ನು ಪಾಲಿಸದೆ ಇಟ್ಟಿಗೆ ಭಟ್ಟಿಗಳನ್ನು ನಡೆಸುತ್ತಿದ್ದಾರೆ.
ಈ ಅನಧಿಕೃತ ಚಟುವಟಿಕೆಯು ಪರಿಸರ ಮತ್ತು ಆಡಳಿತ ವ್ಯವಸ್ಥೆ ಎರಡಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಟ್ಟಿಗೆ ಭಟ್ಟಿ ನಿರ್ವಹಣೆಗೆ ವಾಣಿಜ್ಯ ಭೂಮಿಯ ಬಳಕೆಯ ಜೊತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ.
ಆದರೆ ಈ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಅಥವಾ ಪರವಾನಗಿ ಪಡೆಯಲು ತೋರುತ್ತಿರುವ ಆಲಸ್ಯದಿಂದಾಗಿ ಮಾಲೀಕರು ಅಕ್ರಮ ದಾರಿ ಹಿಡಿದಿದ್ದಾರೆ. ಇಟ್ಟಿಗೆ ತಯಾರಿಕೆಗೆ ಬೇಕಾದ ಮಣ್ಣಿಗಾಗಿ ಮೊದಲು ಕೃಷಿ ಭೂಮಿಯನ್ನು ಅವಲಂಬಿಸುವ ಇವರು, ನಂತರ ಅಕ್ರಮವಾಗಿ ಅರಣ್ಯ ಪ್ರದೇಶದ ಮಣ್ಣನ್ನು ಬಳಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಕೃಷಿ ಜಮೀನಿನಿಂದ ಯಂತ್ರಗಳ ಮೂಲಕ ಮಣ್ಣು ತೆಗೆಯುವುದರಿಂದ ಭೂಮಿಯ ಮೇಲ್ಪದರ ನಾಶವಾಗಿ, ಕೃಷಿ ಯೋಗ್ಯ ಮಣ್ಣಿನ ರಚನೆಗೆ ದೊಡ್ಡ ಪೆಟ್ಟು ಬೀಳುತ್ತಿದೆ.
ಇಟ್ಟಿಗೆ ಸುಡಲು ಬಳಸುವ ಇಂಧನದ ವಿಚಾರವಂತೂ ಮತ್ತಷ್ಟು ಕಳವಳಕಾರಿಯಾಗಿದೆ. 50 ರಿಂದ 75 ಸಾವಿರ ಇಟ್ಟಿಗೆಗಳನ್ನು ಬೇಯಿಸಲು ಸುಮಾರು 2 ರಿಂದ 3 ಟ್ರ್ಯಾಕ್ಟರ್ ಅಷ್ಟು ಕಟ್ಟಿಗೆ ಬೇಕು. ಕಟ್ಟಿಗೆಯನ್ನು ಅಧಿಕೃತ ಅಡ್ಡೆಗಳಿಂದ ಅಲ್ಪ ಪ್ರಮಾಣದಲ್ಲಿ ಪಡೆದು, ಉಳಿದ ಬಹುಪಾಲು ಕಟ್ಟಿಗೆಯನ್ನು ಅರಣ್ಯದಿಂದಲೇ ಅಕ್ರಮವಾಗಿ ಕಡಿದು ತರಲಾಗುತ್ತಿದೆ. ಇದು ಮುಂಡಗೋಡಿನ ದಟ್ಟ ಅರಣ್ಯ ಸಂಪತ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪರಿಸರದ ಸಮತೋಲನವನ್ನು ಏರುಪೇರು ಮಾಡುತ್ತಿದೆ.
ಕೇವಲ ಪರಿಸರ ಅಷ್ಟೇ ಅಲ್ಲದೆ, ಈ ಭಟ್ಟಿಗಳು ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುತ್ತಿವೆ. ಗಣಿ ಇಲಾಖೆಗೆ ಸಲ್ಲಬೇಕಾದ ರಾಯಧನ, ಜಿಎಸ್ಟಿ ಮತ್ತು ಇತರೆ ತೆರಿಗೆಗಳನ್ನು ಪಾವತಿಸದೆ ವಂಚಿಸಲಾಗುತ್ತಿದೆ. ಇದಲ್ಲದೆ, ಹೆಸ್ಕಾಂನಿಂದ ಯಾವುದೇ ಅಧಿಕೃತ ಅನುಮತಿ ಪಡೆಯದೆ ನೇರವಾಗಿ ವಿದ್ಯುತ್ ಕಂಬಗಳಿಂದ ಅಕ್ರಮ ಸಂಪರ್ಕ ಪಡೆದುಕೊಳ್ಳುತ್ತಿರುವುದು ಇಲಾಖೆಯ ಆದಾಯಕ್ಕೆ ಕತ್ತರಿ ಹಾಕುತ್ತಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ: ಖಾಸಗಿ ಶಾಲೆಗಳ ಮಾದರಿಯಲ್ಲಿ ಎಲ್ಕೆಜಿ, ಯುಕೆಜಿ ಆರಂಭ
ಈ ವ್ಯವಸ್ಥಿತ ಅಕ್ರಮವನ್ನು ತಡೆಯಲು ಕೆಎಸ್ಪಿಸಿಬಿ, ಗಣಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಜಂಟಿಯಾಗಿ ಕಾರ್ಯಪ್ರವೃತ್ತರಾಗಬೇಕಿದೆ. ಭಟ್ಟಿ ಮಾಲೀಕರಿಗೆ ದಾಳಿಯ ಭಯ ಹುಟ್ಟಿಸುವ ಜೊತೆಗೆ, ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸೌಹಾರ್ದಯುತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಅಕ್ರಮವಾಗಿ ಭಟ್ಟಿ ನಡೆಸುವವರು ಭವಿಷ್ಯದಲ್ಲಿ ಎದುರಿಸಬಹುದಾದ ದಂಡ ಹಾಗೂ ಜೈಲು ಶಿಕ್ಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ. ಸಾರ್ವಜನಿಕರು ಕೂಡ ವಾಯು ಮಾಲಿನ್ಯದ ಬಗ್ಗೆ ಜಾಗೃತರಾಗಿ ಮುಂಡಗೋಡಿನ ಪರಿಸರ ರಕ್ಷಣೆಗಾಗಿ ಅಧಿಕಾರಿಗಳಿಗೆ ಸಹಕಾರ ನೀಡುವುದು ಅತ್ಯಗತ್ಯವಾಗಿದೆ.





