ಮುಂಡಗೋಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರದ್ದತಿಯ ವಿಚಾರವಾಗಿ ಸಾರ್ವಜನಿಕರಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬಾರದು. ಕೂಲಿಕಾರರು ನಿರಾತಂಕವಾಗಿ ಕೆಲಸ ಮಾಡಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಟಿ.ವಾಯ್. ದಾಸನಕೊಪ್ಪ ಅವರು ಕರೆ ನೀಡಿದರು.
ಬುಧವಾರ ಮುಂಡಗೋಡ ತಾಲೂಕಿನ ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಟ್ರೆಂಚ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರರು ಯೋಜನೆ ರದ್ದುಗೊಳ್ಳುವ ಬಗ್ಗೆ ಕೇಳಿದ ಆತಂಕದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಯೋಜನೆಯ ಸ್ಥಗಿತದ ಕುರಿತು ಇಲಾಖಾ ಮಟ್ಟದಲ್ಲಿ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಭಾಗದ ಅಕುಶಲ ಕೂಲಿಕಾರರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗಾವಕಾಶ ಕಲ್ಪಿಸುವುದು, ದೀರ್ಘ ಬಾಳಿಕೆಯ ಸ್ವತ್ತುಗಳ ನಿರ್ಮಾಣ, ಮಹಿಳಾ ಸಬಲೀಕರಣ ಹಾಗೂ ರೈತರು ಮತ್ತು ಬಡವರ್ಗದ ಜನರ ಜೀವನೋಪಾಯಕ್ಕೆ ದಾರಿ ಮಾಡಿಕೊಡುವ ಉದಾತ್ತ ಆಶಯದೊಂದಿಗೆ ಮನರೇಗಾ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಇದು ಗ್ರಾಮೀಣ ಜನರ ಪಾಲಿನ ಜೀವನಾಡಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಅರಣ್ಯ ಭೂಮಿ-ಸಿಆರ್ಝಡ್ ಸಂಘರ್ಷ; ಜಿಲ್ಲೆಯ ಶೇ 86ರಷ್ಟು ಆಸ್ತಿಗಳಿಗೆ ಸಿಗದ ‘ಇ-ಸ್ವತ್ತು’ ಮಾನ್ಯತೆ
ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಬೇರೆ ರಾಜ್ಯ ಅಥವಾ ನಗರಗಳಿಗೆ ವಲಸೆ ಹೋಗಬಾರದು. ನಿಮ್ಮ ಸ್ವಂತ ಊರಿನಲ್ಲಿಯೇ ಇದ್ದು ಯೋಜನೆಯಡಿ ಕೆಲಸ ಮಾಡಿ ಕೂಲಿ ಪಡೆಯಬಹುದು. ಇದರೊಂದಿಗೆ ಮುಂದಿನ ಆರ್ಥಿಕ ವರ್ಷಕ್ಕೆ ಆಯವ್ಯಯ ಪಟ್ಟಿ ತಯಾರಿಸುತ್ತಿದ್ದು, ಸಾರ್ವಜನಿಕರು ತಮ್ಮ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬೇಡಿಕೆಗಳನ್ನು ಪಂಚಾಯತಿಗೆ ಸಲ್ಲಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಈ ಭೇಟಿಯ ಸಂದರ್ಭದಲ್ಲಿ ಕಾತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ್ ಕಡಪಟ್ಟಿ, ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಬಿಎಫ್ಟಿ ಗಣಪತಿ ಪವಾರ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.





