ಮುಂಡಗೋಡ: ಪಟ್ಟಣದ ಗ್ರಾಮದೇವತೆ ಹಾಗೂ ಶ್ರದ್ಧಾಭಕ್ತಿಯ ಕೇಂದ್ರಬಿಂದುವಾದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಹಾಗೂ ಸಡಗರ ಸಂಭ್ರಮದಿಂದ ನೆರವೇರಿತು.
ಜಾತ್ರೆಯ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಶ್ರೀ ಮಾರಿಕಾಂಬಾ ದೇವಾಲಯದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರ ದಂಡು ಹರಿದು ಬಂದಿದ್ದು, ಮಂಗಳವಾದ್ಯಗಳ ನಿನಾದ ಹಾಗೂ ಸಾಂಪ್ರದಾಯಿಕ ಆಚರಣೆಗಳು ಜಾತ್ರೆಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿವೆ.
ಹೂವಿನ ಸುಂದರ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ಭವ್ಯ ರಥದಲ್ಲಿ ಶ್ರೀ ಮಾರಿಕಾಂಬಾ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಿ ರಥದಲ್ಲಿ ವಿರಾಜಮಾನವಾಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು “ಜೈ ಮಾರಿಕಾಂಬಾ ದೇವಿ” ಎಂದು ಜಯಘೋಷ ಮೊಳಗಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಾತ್ರಾ ಮಹೋತ್ಸವಗಳಲ್ಲೂ ಜೂಜಿನ ಕರಿನೆರಳು; ಬೀಳಬೇಕಿದೆ ಬ್ರೇಕ್
ಸಂಪ್ರದಾಯಬದ್ಧ ವಾದ್ಯಗಳ ನಾದ, ಪೂಜಾ ವಿಧಿವಿಧಾನಗಳ ಪಾವಿತ್ರ್ಯ ಇಡೀ ವಾತಾವರಣಕ್ಕೆ ದೈವಿಕ ಭಾವವನ್ನು ತುಂಬಿತು. ರಥವನ್ನು ಎಳೆಯಲು ಭಕ್ತರು ಉತ್ಸಾಹದಿಂದ ಮುಗಿಬಿದ್ದು, ಜಾತ್ರೆಯ ಸಂಭ್ರಮವು ಭಕ್ತಿಭಾವದ ಮಹಾಸಾಗರವನ್ನೇ ಸೃಷ್ಟಿಸಿತು. ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವಿಯ ಕೃಪೆಗೆ ಪಾತ್ರರಾದರು.





