ಮುಂಡಗೋಡ: ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ಹಾಗೂ ಯುವರತ್ನ ಯುವ ಒಕ್ಕೂಟ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಲೊಯೋಲ ವಿಕಾಸ ಕೇಂದ್ರದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ಫಾ. ಅನಿಲ್ ಡಿ’ಸೋಜ ಅವರು ಮಾತನಾಡಿ, “ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ರೂಪಿಸುವ ಮೂಲಕ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ಅಡಿಪಾಯ ಹಾಕಿದ್ದಾರೆ. ಜಗತ್ತಿನ ಅತಿ ದೊಡ್ಡ ಸಂವಿಧಾನವೇ ಭಾರತದ ಸಂವಿಧಾನವಾಗಿದ್ದು, ಇದು ನಮ್ಮ ದೇಶದ ಆತ್ಮವಾಗಿದೆ. ಹೃದಯವಿಲ್ಲದೆ ಬದುಕಲು ಸಾಧ್ಯವಿಲ್ಲದಂತೆ ಸಂವಿಧಾನವಿಲ್ಲದೆ ದೇಶವೂ ಸಾಗಲಾರದು. ಸಹೋದರತೆಯಿಂದ ಬದುಕಲು, ಸಾಮಾಜಿಕ-ಆರ್ಥಿಕ-ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಲು ಸಂವಿಧಾನ ದಾರಿ ತೋರಿದೆ. ಈ ದಿನವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ ಪ್ರತಿದಿನ ಪಾಲನೆ ಮಾಡಬೇಕು, ಓದಿ ಅರ್ಥೈಸಿಕೊಳ್ಳಬೇಕು” ಎಂದು ತಿಳಿಸಿದರು.
ಜನವೇದಿಕೆ ಮುಖಂಡ ನಾಗರಾಜ ಕಟ್ಟಿಮನಿ ಅವರು ಸಂವಿಧಾನ ಮೌಲ್ಯಗಳ ಕುರಿತು ಮಾತನಾಡಿ, “ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ಕೇವಲ ಎಸ್ಸಿ-ಎಸ್ಟಿ ಸಮುದಾಯಕ್ಕೆ ಮಾತ್ರ ಎನ್ನುವ ತಪ್ಪು ಕಲ್ಪನೆ ಸಮಾಜದಲ್ಲಿದ್ದು, ಅದನ್ನು ಬದಲಿಸಬೇಕಿದೆ. ಸಂವಿಧಾನ ಎಲ್ಲ ನಾಗರಿಕರಿಗೂ ಸಮಾನ ಹಕ್ಕು ನೀಡಿದೆ. ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು, ಮಹಿಳೆಯರಿಗೆ ಮತದಾನ ಹಕ್ಕು ದೊರೆತಿರುವುದು ಹಾಗೂ ಗ್ರಾಮ ಪಂಚಾಯತ್ಗಳಲ್ಲಿ 50% ಮೀಸಲಾತಿ ಕಲ್ಪಿಸಿರುವುದು ಇತಿಹಾಸದ ಮಹತ್ವದ ಹೆಜ್ಜೆಯಾಗಿದ್ದು, ಇಷ್ಟಾದರೂ ಸಮಾನತೆಗಾಗಿ ಹೋರಾಟ ಮುಂದುವರಿದಿದೆ. 18 ವರ್ಷದೊಳಗಿನ ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಬೇಕು. ಶಾಲೆಗಳ ಭೇಟಿ, ಬಿಸಿಯೂಟ ಹಾಗೂ ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ನಿರಂತರ ಪರಿಶೀಲನೆ ಅಗತ್ಯ” ಎಂದು ಹೇಳಿದರು.
ಲೊಯೋಲ ವಸತಿ ನಿಲಯದ ಪಾಲಕಿ ಜ್ಯೋತಿ ಚಿಗಳ್ಳಿ ಅವರು ಮಾತನಾಡಿ, “ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಧರ್ಮ ನಿರಪೇಕ್ಷತೆ ಎಂಬ ಸಂವಿಧಾನದ ಮೌಲ್ಯಗಳು ಹಾಗೂ ಅಂಬೇಡ್ಕರ್ ಆಶಯಗಳು ಪ್ರತಿಯೊಬ್ಬರ ಮನಸ್ಸಲ್ಲೂ ಜಾಗೃತಿಯಾಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು
ಕಾರ್ಯಕ್ರಮದಲ್ಲಿ ಯುವರತ್ನ ಯುವ ಒಕ್ಕೂಟದ ಅಧ್ಯಕ್ಷ ತನ್ವಿರ್ ಮಿರ್ಜಾನಕರ, ಎಸ್ಡಿಪಿ ಯೋಜನೆ ನಿರ್ದೇಶಕರಾದ ಫಾ. ಆಲ್ವಿನ್ ಡಿ’ಸೋಜ, ಜನವೇದಿಕೆ ನಾಯಕ ರವಿ ಲಮಾಣಿ, ಮಹಿಳಾ ಸಂಘದ ಸದಸ್ಯರು, ಯುವ ಒಕ್ಕೂಟದ ಸದಸ್ಯರು, ಕಂಪ್ಯೂಟರ್ ಹಾಗೂ ಹೊಲಿಗೆ ವಿಭಾಗದ ವಿದ್ಯಾರ್ಥಿಗಳು ಮತ್ತು ಎಲ್ವಿಕೆ ಸಿಬ್ಬಂದಿಗಳು ಸೇರಿ ಒಟ್ಟು 62 ಜನರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶ್ರೀದೇವಿ ಭದ್ರಾಪುರ ಅವರು ನಡೆಸಿಕೊಟ್ಟರು. ತೇಜಸ್ವಿನಿ ಬೇಗೂರು ಅವರು ಸ್ವಾಗತಿಸಿದರು, ದೀಪಾ ಕೋಳೂರು ಅವರು ವಂದಿಸಿದರು. ಹಜರತ್ ಮುಲ್ಲಾನವರ ಮತ್ತು ತಂಡದಿಂದ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಜಾಗೃತಿ ಗೀತೆಗಳನ್ನು ಹಾಡಿದರು.





