ಬಾಬು ಜಗಜೀವನ ರಾಮ್ ಹೆಸರಿನ ಭವನ ನಿರ್ಮಿಸಲು ಸರ್ಕಾರವೇ ನಿವೇಶನ ನೀಡಿದ್ದರೂ ತಕರಾರು ತೆಗೆದು ಭವನ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವ ಮುಂಡಗೋಡ ಗ್ರಾಮ ಪಂಚಾಯತ್ ಅಧ್ಯಕ್ಷನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಸಂಸ ಮುಖಂಡರು ಆಗ್ರಹಿಸಿ, ಪ್ರತಿಭಟನೆ ನಡೆಸಿದರು.
ಮುಂಡಗೋಡ ತಾಲ್ಲೂಕಿನ ನಂದಿಗಟ್ಟಾ ಗ್ರಾಮ ಪಂಚಾಯತ್ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿದರು.ಧರಣಿಗೆ ಮೊದಲು ನಂದಿಗಟ್ಟಾ ಗ್ರಾಮದ ಕೆಂದಲಗೇರಿ ರಸ್ತೆಯಲ್ಲಿರುವ ಡಾ. ಬಾಬು ಜಗಜೀವನ್ ರಾಮ್ ಅವರ ಗದ್ದುಗೆಯಿಂದ ಮೆರವಣಿಗೆ ಪ್ರಾರಂಭಿಸಿ, ಗ್ರಾಮದಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆಗಳನ್ನು ಕೂಗುತ್ತ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನಾಕಾರರು ಜಮಾಯಿಸಿದರು.
ಡಾ. ಬಾಬು ಜಗಜೀವನ್ ರಾಮ್ ಸಭಾಭವನ ನಿರ್ಮಾಣಕ್ಕಾಗಿ ನಂದಿಗಟ್ಟಾ ಗ್ರಾಮ ಸರ್ವೆ ನಂ. 93ರಲ್ಲಿನ 10 ಗುಂಟೆ ನಿವೇಶನವನ್ನು ಸರ್ಕಾರದಿಂದ ಮಂಜೂರು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿಯವರು ಹಲವು ಬಾರಿ ತಹಶಿಲ್ದಾರರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರು. ನಂದಿಗಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 10,000 ಜನರ ಜನಸಂಖ್ಯೆ ಇದ್ದು, ಅದರಲ್ಲಿ ಬಹುತೇಕರು ದಲಿತ ಸಮುದಾಯದವರು. ವಿಶೇಷವಾಗಿ ಮಾದಿಗ/ಮಾದರ ಸಮುದಾಯದವರ ಸಂಖ್ಯೆ ಹೆಚ್ಚು. ಈ ಹಿನ್ನೆಲೆಯಲ್ಲಿ ಸಮುದಾಯದ ಪ್ರಮುಖರು ಸೇರಿ ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಭವನ ನಿರ್ಮಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಆದರೆ ಸ್ಥಳ ಮಂಜೂರಾತಿ ಹಂತದಲ್ಲಿದ್ದಾಗ, ಮೇಲ್ಜಾತಿಗೆ ಸೇರಿದ ಪಂಚಾಯತ್ ಅಧ್ಯಕ್ಷ ಸಂತೋಷ ಬೋಸ್ಲೆ ಮತ್ತು ಇತರರು ತಹಶಿಲ್ದಾರರಿಗೆ ತಕರಾರು ಅರ್ಜಿ ಸಲ್ಲಿಸಿ ಭವನ ನಿರ್ಮಾಣವನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ಸಂಘಟನೆಯವರು ಆರೋಪಿಸಿದರು. ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಸಮುದಾಯ ಭವನ ನಮ್ಮ ಊರಲ್ಲಿ ಬೇಡವೆಂದು ಹೇಳುವ ಅವರ ಮನೋಭಾನೆ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಜೀವಂತವಾಗಿ ಇರಿಸುವ ಮನಸ್ಥಿತಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ ಬೋಸ್ಲೆ, ರಮೇಶ ನೇಮಣ್ಣನವರ, ಪರಶುರಾಮ ಮೇಂತೆಕಾರ, ವಿಷ್ಣು ಮಲ್ಲಪ್ಪ ನಿಂಬೋಜಿ ಮತ್ತು ರಾಮಣ್ಣ ಮುಗಳಿ ಇವರ ವಿರುದ್ಧ SC/ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಯವರು ಮನವಿ ಮಾಡಿದರು. ಅಲ್ಲದೆ, ಸಂತೋಷ ಬೋಸ್ಲೆ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ಮಾಡಿದ ಎಲ್ಲ ಕಾಮಗಾರಿಗಳ ಸೂಕ್ತ ತನಿಖೆ ನಡೆಸಬೇಕೆಂದು ಬೇಡಿಕೆ ಇಟ್ಟರು.
ಈ ಸುದ್ದಿ ಓದಿದ್ದೀರಾ? ಕುಮಟಾ | ದಸಂಸ ಸಮಾಲೋಚನಾ ಸಭೆ; ಸಂಘಟನೆಯ ಬಲವರ್ಧನೆಗೆ ತೀರ್ಮಾನ
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಧರಣಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿ ಮೂರು ದಿನಗಳಲ್ಲಿ ತಮ್ಮ ಬೇಡಿಕೆಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದರು. ಪಂಚಾಯಿತಿ ಅವರ ಭರವಸೆಗೆ ಸ್ಪಂದಿಸಿದ ಪ್ರತಿಭಟನೆಕಾರರು ಧರಣಿಯನ್ನು ಒಂದು ವಾರದವರೆಗೆ ತಾತ್ಕಾಲಿಕವಾಗಿ ಮುಂದೂಡುತ್ತೆವೆ ಸಮಸ್ಯೆ ಪರಿಹರಿಸದಿದ್ದರೆ ಮತ್ತೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಧರಣಿ ಸತ್ಯಾಗ್ರಹದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕ್ಕೀರಪ್ಪ, ಜಿಲ್ಲಾ ಸಂಚಾಲಕರು ಗೋಪಾಲ್ ನಡಕಿನಮನಿ, ಹನಮಂತ ಕಟ್ಟಿಮನಿ, ಬಸವರಾಜ ಹಳ್ಳಮ್ಮನವರ, ಸಂತೋಷ ಕಟ್ಟಿಮನಿ, ಜಿಲ್ಲಾ ಸಂಚಾಲಕಿ ಸಂಗೀತಾ ವಾಗಮೋರೆ, ತಾಲೂಕು ಸಂಚಾಲಕ ಜೂಜೆ ಸಿದ್ದಿ, ನಗರ ಸಂಚಾಲಕ ಹುಲಗಪ್ಪ ಬೋವಿವಡ್ಡರ, ಸಂಘಟನಾ ಸಂಚಾಲಕರು ಲಕ್ಷ್ಮಣ ಬೋವಿವಡ್ಡರ, ಪ್ರಭು ಅರಿಸಣಗೇರಿ, ಮನೋಹರ ನಡಕಿನಮನಿ, ರಮೇಶ್ ಖಾತೆದಾರ, ಶಿವಾನಂದ ಪೂಜಾರ, ರಮೇಶ್ ಮಾಡಳ್ಳಿ, ಭೀಮಪ್ಪ ಹುಲಿಹೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು





