ಮುಂಡಗೋಡ: ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಸುಗಮವಾಗಿ ಪಡೆಯಲು ರೈತರು ಇ-ಕೆವೈಸಿ (E-KYC) ಮಾಡಿಸಿ, ಸೆಂಟ್ರಲ್ ಐಡಿ (Central ID) ಪಡೆಯುವುದು ಕಡ್ಡಾಯವಾಗಿದೆ ಎಂದು ಮುಂಡಗೋಡಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀ ಕೃಷ್ಣಾ ಟಿ. ಕುಳೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಎಂ-ಕಿಸಾನ್ (PM-KISAN) ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅತ್ಯಗತ್ಯವಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸದ ರೈತರು ಮುಂದಿನ ದಿನಗಳಲ್ಲಿ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ, ಇದುವರೆಗೂ ಸೆಂಟ್ರಲ್ ಐಡಿ ಪಡೆಯದ ಮುಂಡಗೋಡ ತಾಲ್ಲೂಕಿನ ರೈತರು ತಕ್ಷಣವೇ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಲಾಗಿದೆ. ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಅಥವಾ ಮುಂಡಗೋಡಿನ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಸೆಂಟ್ರಲ್ ಐಡಿ ಪಡೆದುಕೊಳ್ಳಬಹುದು.
ಈ ಪ್ರಕ್ರಿಯೆಗಾಗಿ ರೈತರು ತಮ್ಮ ಹೆಸರಿನಲ್ಲಿರುವ ಇತ್ತೀಚಿನ ಪಹಣಿ ಪತ್ರ, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು.ಇ-ಕೆವೈಸಿ ಪೂರ್ಣಗೊಳಿಸುವುದು, ಮೊಬೈಲ್ ಸಂಖ್ಯೆ ನವೀಕರಿಸುವುದು ಹಾಗೂ ಎಲ್ಲಾ ಜಮೀನಿನ ಸರ್ವೇ ನಂಬರ್ಗಳನ್ನು ಲಿಂಕ್ ಮಾಡುವ ಭೂ ಘೋಷಣೆ (Land Declaration) ಕಾರ್ಯಗಳನ್ನು ಫೆಬ್ರವರಿ 25, 2026ರ ಸಂಜೆ ಒಳಗೆ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಪ್ರಯಾಣಿಕರ ಗಮನಕ್ಕೆ: ಮಾರಿಕಾಂಬಾ ಜಾತ್ರೆ ಹಿನ್ನೆಲೆ ಬಸ್ ಸಂಚಾರ ಮಾರ್ಗ ಬದಲಾವಣೆ
ಹೆಚ್ಚಿನ ಮಾಹಿತಿಗಾಗಿ ರೈತರು ಮುಂಡಗೋಡ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀ ರಮೇಶ್ ಜಮಖಂಡಿ (ಮೊ. 9632841838) ಅಥವಾ ಪಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶ್ರೀ ರಾಮಪ್ಪ ನಡುವಿನಮನಿ (ಮೊ. 9844654413) ಅವರನ್ನು ಸಂಪರ್ಕಿಸಬಹುದಾಗಿದೆ.





