ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ತಾಲೂಕಿನ ಅಗಡಿ ಗ್ರಾಮದಲ್ಲಿರುವ ಒಂದು ಅಂಗಡಿಯ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಸ್ಥಳದಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದರು. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿತ್ತು.
“ಬಂಧಿತ ವ್ಯಕ್ತಿಯು ಮದ್ಯವನ್ನು ಯಾರಿಂದ ಖರೀದಿಸಿದ್ದಾನೆ ಮತ್ತು ಎಷ್ಟು ಸಮಯದಿಂದ ಮಾರಾಟ ಮಾಡುತ್ತಿದ್ದಾನೆ ಹಾಗೂ ಇದೇ ರೀತಿ ಬೇರೆ ಬೇರೆ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವವರು ಯಾರ ಕಡೆಯಿಂದ ಮದ್ಯದ ಬಾಟಲಿಗಳನ್ನು ಖರೀದಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ, ಇಲ್ಲವೇ ಗ್ರಾಮದಲ್ಲಿ ಸದ್ದಿಲ್ಲದೆ ನಕಲಿ ಮದ್ಯ ತಯಾರಿಸುವ ಗುಂಪು ತಲೆ ಎತ್ತಿದೆಯಾ ಎಂಬುದರ ಕುರಿತು ಅಬಕಾರಿ ಇಲಾಖೆ ತನಿಖೆ ನಡೆಸಿ ಬಹಿರಂಗಪಡಿಸಬೇಕು. ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಹಳ್ಳಿಗಳಲ್ಲಿ ಮದ್ಯ ಸರಬರಾಜು ಮಾಡುತ್ತಿರುವ ಮದ್ಯಂಗಡಿಗಳನ್ನು ಪತ್ತೆಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.
“ಮುಂಡಗೋಡ ಪಟ್ಟಣದ ಪ್ರಮುಖ ರಸ್ತೆ ಪಕ್ಕದಲ್ಲಿರುವ ಕೆಲವೊಂದು ಹೊಟೇಲ್ಗಳಲ್ಲಿ ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅದೇ ರೀತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಣ್ಣ ಕಿರಾಣಿ ಅಂಗಡಿಗಳಲ್ಲಿ, ಹೊಟೇಲ್ಗಳಲ್ಲಿ ಹಾಗೂ ಮನೆಗಳ ಅಕ್ಕ ಪಕ್ಕದ ಖಾಲಿ ಜಾಗಗಳಲ್ಲಿ ಮದ್ಯದ ಬಾಟಲಿಗಳನ್ನು ಶೇಖರಿಸಿ ರಹಸ್ಯವಾಗಿ ಮಾರಾಟ ಮಾಡತ್ತಿರುವುದು ಹೊಸ ವಿಷಯವೇನಲ್ಲ. ಇದರ ಬಗ್ಗೆ ಹಲವು ಬಾರಿ ಅಬಕಾರಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಸ್ಥಳೀಯರು ಹೇಳುತ್ತಾರೆ.
ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿರುವ ಪ್ರಕಾರ, “ಮುಂಡಗೋಡ ಪಟ್ಟಣ ವ್ಯಾಪ್ತಿಯ ಮದ್ಯದ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಅವರು ಮಾಹಿತಿ ಹಕ್ಕು ಕಾಯ್ದೆ(RTI) ಮೂಲಕ ಅರ್ಜಿ ಸಲ್ಲಿಸಿದರೂ, ಅದರ ಬಗ್ಗೆ ಇಲಾಖೆ ವತಿಯಿಂದ ಉತ್ತರ ದೊರೆತಿಲ್ಲ. ಮುಂಡಗೋಡ ತಾಲೂಕಿನಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ಮದ್ಯದಂಗಡಿಯ ಅಕ್ಕ ಪಕ್ಕದಲ್ಲಿ ಮತ್ತು ಕೌಂಟರ್ ಮುಂದೆ ಕುಡಿಯಲು ಕೊಡುತ್ತಾರೆ. ಎಲ್ಲವೂ ಗೊತ್ತಿದ್ದರೂ, ದೂರು ನೀಡಿದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದನ್ನು ನೋಡಿದರೆ ಇಲಾಖೆಯ ಕಾರ್ಯವೈಖರಿ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ” ಎಂದು ಆರೋಪಿಸಿದರು.
“ನಂದಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ಅಂಗಡಿಗಳಲ್ಲಿ ಮತ್ತು ಹೊಟೇಲ್ಗಳಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ. ಈ ಒಂದೇ ಗ್ರಾಮದ ಒಂದು ದಿನದ ಆದಾಯ 1 ಲಕ್ಷ ರೂಪಾಯಿಗೂ ಅಧಿಕವಾಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ 14-15 ವರ್ಷದ ವಯಸ್ಸಿನ ಬಾಲಕರು ಮದ್ಯಪಾನ ಮಾಡಿ ದಾರಿ ತಪ್ಪುತ್ತಿದ್ದಾರೆ. ಕಣ್ಣ ಮುಂದೆ ಮಕ್ಕಳು ಹಾಳಾಗುತ್ತಿರುವುದನ್ನು ನೋಡಿ ತಂದೆ ತಾಯಿಗಳು ನಿತ್ಯವೂ ಕಣ್ಣಿರು ಹಾಕುವಂಥ ದುಃಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಕುಡಿದು ಬರುವ ಗಂಡಸರು ಮನೆಗಳಲ್ಲಿ ಜಗಳವಾಡುವುದರಿಂದ ಅನೇಕ ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಮಸ್ಯೆಯನ್ನು ಪರಿಹರಿಸಿ ಅಕ್ರಮವಾಗಿ ತಲೆ ಎತ್ತಿರುವ ಮದ್ಯದಂಗಡಿಗಳನ್ನು ಮುಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಗ್ರಾಮದ ಮಹಿಳೆಯರು ಮತ್ತು ಯುವಕರು ಎಚ್ಚರಿಸಿದ್ದಾರೆ. ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಅಬಕಾರಿ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರವಾರ: 24 ಗಂಟೆಯೊಳಗೆ ಕಳ್ಳತನ ಪ್ರಕರಣ ಭೇದಿಸಿದ ಶಹರ ಠಾಣೆ ಪೊಲೀಸರು
ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಹೆಚ್ಚಳವಾಗಿರುವುದರಿಂದ ರಾಜ್ಯಾದ್ಯಂತ ಎಲ್ಲ ಹಳ್ಳಿಗಳ ಹಿರಿಯರು ಸೇರಿದಂತೆ ಯುವಜನರೂ ಕುಡಿತದ ಸೆಲೆಯಲ್ಲು ಮುಳುಗಿದ್ದಾರೆ. ಅಬಕಾರಿ ಇಲಾಖೆಯ ನಿರ್ಲಕ್ಷ್ಯದಿಂದ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯಲು ಅಬಕಾರಿ ಇಲಾಖೆ ತಕ್ಷಣೀಯ ಕಾರ್ಯಾಚರಣೆಗಳನ್ನು ಆರಂಭಿಸಬೇಕು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸರ್ಕಾರವು ಅಬಕಾರಿ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸಲು ಮುಂದಾಗಬೇಕು. ಸಾರ್ವಜನಿಕರ ಆಕ್ರೋಶವು ಒಂದು ಸಂಕೇತವಾಗಿದ್ದು, ಇದನ್ನು ಕಡೆಗಣಿಸಿದರೆ ಸಾಮಾಜಿಕ ಅಸ್ಥಿರತೆ ಹೆಚ್ಚಾಗುವ ಸಾಧ್ಯತೆಯಿದೆ. ತ್ವರಿತ ಕ್ರಮಗಳ ಮೂಲಕ ಮುಂಡಗೋಡದಂತಹ ಬಹುತೇಕ ಹಳ್ಳಿ ಮತ್ತು ಪಟ್ಟಣಗಳನ್ನು ಶಾಂತತೆ ಹಾಗೂ ಸುರಕ್ಷಿತ ಸ್ಥಳವನ್ನಾಗಿ ಮಾಡುವ ಸಾಧ್ಯತೆಯಿದೆ.




