ಮುಂಡಗೋಡ: ಅವಕಾಶಗಳ ಮಹಾನಗರವಾದ ಬೆಂಗಳೂರಿನಲ್ಲಿ ಸುಮಾರು 22 ವರ್ಷಗಳ ಕಾಲ ಹೋರಾಟದ ಜೀವನ ನಡೆಸಿ, ಕೊನೆಗೆ ನೆಮ್ಮದಿ ಅರಸಿ ಸ್ವಂತ ಗ್ರಾಮಕ್ಕೆ ಮರಳಿದ ವ್ಯಕ್ತಿಯೊಬ್ಬರಿಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA) ಕೈ ಹಿಡಿದು ಲಕ್ಷಾಂತರ ರೂ. ಆದಾಯದ ಮೂಲವನ್ನು ಸೃಷ್ಟಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಬೆಡಸಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಕ್ಕೋಡು ಗ್ರಾಮದ ನಿವಾಸಿ ಸುಭಾಸ್ಚಂದ್ರ ಮಾರೆಪ್ಪ ನಾಯ್ಕ್ ಈ ಯಶೋಗಾಥೆಯ ನಾಯಕ. ಪ್ರಾಥಮಿಕ ಶಿಕ್ಷಣದ ಹೊರತಾಗಿ ಬೇರೆ ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದ ಇವರು, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲದಿಂದ ಬೆಂಗಳೂರಿಗೆ ತೆರಳಿದ್ದರು.
ಬೆಂಗಳೂರಿನಲ್ಲಿ ದೊಡ್ಡ ಕಂಪನಿಗಳಲ್ಲಿ ಅವಕಾಶ ಸಿಗದೇ ಹೋದಾಗ, ಸುಭಾಸ್ಚಂದ್ರ ಅವರು ಸ್ವಂತ ತೋಳ್ಬಲ ನಂಬಿ ಗಾರ್ಮೆಂಟ್ಸ್ನಲ್ಲಿ ಟೈಲರಿಂಗ್ ಕೆಲಸ ಮಾಡಿದರು. ನಂತರ ಚಿಕ್ಕದಾಗಿ ಚಹಾ ಅಂಗಡಿ ತೆರೆದು ಬದುಕು ಸಾಗಿಸಿದರು. ಹೆಸರಿನಷ್ಟೇ ದೊಡ್ಡ ಖರ್ಚು ಹೊಂದಿರುವ ಸಿಲಿಕಾನ್ ಸಿಟಿಯಲ್ಲಿ ಸಣ್ಣ ದುಡಿಮೆಯಿಂದ ಜೀವನ ನಿರ್ವಹಿಸುವುದು ಕಷ್ಟವಾಯಿತು. ಪ್ರತಿನಿತ್ಯ ಒಂದಷ್ಟು ಹಣ ಕೈಯಲ್ಲಿ ಓಡಾಡುತ್ತಿದ್ದರೂ, ನೆಮ್ಮದಿ ಮಾತ್ರ ದೊರೆಯಲಿಲ್ಲ.
ನಗರದ ಜೀವನ ಸಾಕಾಗಿ, ಸ್ವಂತ ಊರಿಗೆ ಮರಳಿ ಏನಾದರೂ ಮಾಡಬೇಕೆಂದು ಕನಸು ಕಂಡ ಸುಭಾಸ್ಚಂದ್ರ ಅವರಿಗೆ, ನೆಮ್ಮದಿಯ ಜೀವನಕ್ಕಾಗಿ ನರೇಗಾ ಯೋಜನೆ ದಾರಿ ತೋರಿಸಿತು. 2024-2025ನೇ ಸಾಲಿನಲ್ಲಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸುಮಾರು ₹70,000 ಅನುದಾನದಲ್ಲಿ ಆಧುನಿಕ ಮಾದರಿಯ ಕುರಿ ಶೆಡ್ ಅನ್ನು ಅವರು ನಿರ್ಮಿಸಿಕೊಂಡರು. ಇದರಲ್ಲಿ ₹2,220 ಕೂಲಿ ಮೊತ್ತ (6 ಮಾನವ ದಿನಗಳು, ದಿನಕ್ಕೆ ₹370 ಕೂಲಿ) ಮತ್ತು ₹66,565 ಸಾಮಗ್ರಿ ಮೊತ್ತವನ್ನು ಪಾವತಿಸಲಾಗಿದೆ.
ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ನೆರವಿನಿಂದ ಶೆಡ್ ಉತ್ತಮ ರೀತಿಯಲ್ಲಿ ನಿರ್ಮಾಣವಾಯಿತು. ಈ ಯೋಜನೆಯ ನೆರವಿನಿಂದ ಕುರಿ ಸಾಕಾಣಿಕೆಗೆ ಅಣಿಯಾದ ಸುಭಾಸ್ಚಂದ್ರ ಅವರು ಪ್ರಸ್ತುತ 20ಕ್ಕೂ ಹೆಚ್ಚು ಕುರಿಗಳನ್ನು ಸಾಕುತ್ತಿದ್ದಾರೆ. ಬ್ಯಾಚ್ ಮಾದರಿಯಲ್ಲಿ ಕುರಿಗಳನ್ನು ಮಾರಾಟ ಮಾಡುವ ಮೂಲಕ ಅವರು ಇಂದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಇದಲ್ಲದೆ, ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆಯುತ್ತಿರುವ ಅಡಿಕೆ ತೋಟಕ್ಕೆ ಕುರಿ ಹಿಕ್ಕೆಯನ್ನು ಉತ್ತಮ ಗೊಬ್ಬರವಾಗಿ ಬಳಸಿಕೊಳ್ಳುವ ಮೂಲಕ ಉಪಲಾಭವನ್ನೂ ಪಡೆಯುತ್ತಿದ್ದಾರೆ. ಸ್ವಂತ ಹಳ್ಳಿಯಲ್ಲಿ ಕುರಿ ಸಾಕಾಣಿಕೆ ಮತ್ತು ಅಡಿಕೆ ತೋಟದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವುದಾಗಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
“ಬೆಂಗಳೂರಲ್ಲಿ ದುಡಿಮೆ ಇತ್ತು, ನೆಮ್ಮದಿ ಇರಲಿಲ್ಲ. ಸಿಟಿ ಜೀವನ ಸಾಕಾಗಿ ಹಳ್ಳಿಯೇ ಬೇಕಾದಾಗ ನರೇಗಾ ಕೈಹಿಡಿಯಿತು. ಉದ್ಯೋಗ ಖಾತರಿ ಯೋಜನೆ ನೆರವಿನಿಂದ ಕುರಿ ಸಾಕಾಣಿಕೆ ಉದ್ಯಮ ಮಾಡಿಕೊಂಡು ನೆಮ್ಮದಿ ಜೀವನ ನಡೆಸುವಂತಾಗಿದೆ”ಎಂದು ಸುಭಾಸ್ಚಂದ್ರ ಮಾರೆಪ್ಪ ನಾಯ್ಕ್, ಅವರು ಹೆಮ್ಮೆಯಿಂದ ಹೇಳಿದರು.
ಈ ಸುದ್ದಿ ಓದಿದ್ದೀರಾ? ನನಸಾಗದ ʼಸ್ವಂತ ಮನೆʼ ಕನಸು; ಸಂಗ್ರಹಿಸಿದ ಶುಲ್ಕಕ್ಕೆ ಲೆಕ್ಕ ಕೊಡುವುದೇ ಗೃಹ ಮಂಡಳಿ
ಅರ್ಹರು ಯೋಜನೆಯ ಸದುಪಯೋಗ ಪಡೆಯಲಿ ಮನರೇಗಾ ಯೋಜನೆಯಡಿ ಜನರ ಜೀವನಮಟ್ಟವನ್ನು ಸುಧಾರಿಸಲು ನೂರಾರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಸೌಲಭ್ಯ ಪಡೆಯಲು ಅವಕಾಶವಿದೆ. ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಂಡಗೋಡ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ ಅವರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ರೈತರು ಮತ್ತು ಪಶುಪಾಲಕರಿಗೆ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಶಾಶ್ವತವಾದ ಆರ್ಥಿಕ ಬಲ ನೀಡುವ ನಿಟ್ಟಿನಲ್ಲಿ ಹಸು, ಕುರಿ, ಕೋಳಿ ಶೆಡ್ಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ ಇದರ ಉಪಯೋಗ ಅರ್ಹ ಫಲಾನುಭವಿಗಳು ಪಡೆದು ಬದುಕು ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕ ಕರೀಂ ಅಸದಿ ಅವರು ಯೋಜನೆ ಬಗ್ಗೆ ಮಾಹಿತಿ ನೀಡಿದರು.





