ಮುಂಡಗೋಡ: ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿ ದೊರಕಬೇಕು ಎಂದು ಆಗ್ರಹಿಸಿ, ಉತ್ತರ ಕನ್ನಡ ಜನವೇದಿಕೆ ಮತ್ತು ಕರ್ನಾಟಕ ಜನಾರೋಗ್ಯ ಚಳುವಳಿಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮುಂಡಗೋಡಿನಲ್ಲಿ ‘ನಮ್ಮ ಆರೋಗ್ಯ ನಮ್ಮ ಹಕ್ಕು’ ಜಿಲ್ಲಾ ಮಟ್ಟದ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ ಒತ್ತಾಯಿಸಿ, ನೂರೈವತ್ತಕ್ಕೂ ಹೆಚ್ಚು ಸಮುದಾಯ ನಾಯಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಭಾಗವಹಿಸಿದ್ದ ಬೃಹತ್ ಜನಜಾಗೃತಿ ಜಾಥಾ ಮುಂಡಗೋಡದ ಪರಿವೀಕ್ಷಣಾ ಮಂದಿರದಿಂದ (IB) ತಹಶೀಲ್ದಾರ್ ಕಚೇರಿವರೆಗೆ ಸಾಗಿತು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ಅಂಗನವಾಡಿಗಳು ಮತ್ತು ಶಾಲಾ ಆರೋಗ್ಯ ಕಾರ್ಯಕ್ರಮಗಳನ್ನು ಸುಧಾರಿಸುವಂತೆ ಜಾಥಾದಲ್ಲಿ ಪಾಲ್ಗೊಂಡಿದ್ದವರು ಘೋಷಣೆಗಳನ್ನು ಕೂಗಿದರು. ಜಾಥಾದ ಬಳಿಕ, ತಹಶೀಲ್ದಾರರ ಮೂಲಕ ರಾಜ್ಯದ ಆರೋಗ್ಯ ಸಚಿವರಿಗೆ ವಿವರವಾದ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಲಾಯಿತು.
ಉತ್ತರ ಕನ್ನಡ ಜನವೇದಿಕೆಯ ಮುಖಂಡರಾದ ಶ್ರೀ ರವಿ ಲಮಾಣಿ ಅವರು ಮಾತನಾಡಿ, ಮುಂಡಗೋಡ ತಾಲೂಕಿನಲ್ಲಿರುವ ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಹೇಳಿದರು. “ಗಡಿಭಾಗದ ಮುಂಡಗೋಡಿನಲ್ಲಿ ಕೇವಲ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅದರಲ್ಲಿ 24×7 ಸೇವೆ ಒದಗಿಸುತ್ತಿರುವುದು ಕೇವಲ ಒಂದು ಕೇಂದ್ರ ಮಾತ್ರ. ಮುಖ್ಯವಾಗಿ, ಅರಿಸಿಣಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಅಂದಾಜು 49000 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವುದರಿಂದ ಈ ಭಾಗದಲ್ಲಿ ಮತ್ತೊಂದು ಪಿಎಚ್ಸಿ ಸ್ಥಾಪನೆ ಜನರ ದೀರ್ಘಕಾಲದ ಬೇಡಿಕೆಯಾಗಿದೆ,” ಎಂದು ಅವರು ತಿಳಿಸಿದರು.
ಪ್ರಮುಖ ಬೇಡಿಕೆಗಳು: ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24×7 ಕಾರ್ಯ ನಿರ್ವಹಿಸುವಂತೆ ಬಲಪಡಿಸಬೇಕು, ವೈದ್ಯರು ಮತ್ತು ಇತರೆ ಅಗತ್ಯ ಸಿಬ್ಬಂದಿ ವರ್ಗದವರನ್ನು ತಕ್ಷಣವೇ ನೇಮಕ ಮಾಡಬೇಕು, ತಾಲೂಕು ಆಸ್ಪತ್ರೆ ಮತ್ತು ಪಿಎಚ್ಸಿಗಳಲ್ಲಿ ಅವಶ್ಯಕ ವೈದ್ಯರು, ನರ್ಸ್ಗಳ ನೇಮಕದೊಂದಿಗೆ ಎಲ್ಲ ರೀತಿಯ ಆರೋಗ್ಯ ಸೇವೆಗಳು ಲಭ್ಯವಾಗಬೇಕು, ಪಿಎಚ್ಸಿಗಳಲ್ಲಿ 104 ಬಗೆಯ ಅವಶ್ಯಕ ಔಷಧಿಗಳ ವಿತರಣೆ ಮತ್ತು 108 ಆಂಬುಲೆನ್ಸ್ ಸೇವೆಯನ್ನು ಕಡ್ಡಾಯವಾಗಿ ಒದಗಿಸಬೇಕು, ಹೆರಿಗೆ ವಾರ್ಡ್, ಮಹಿಳಾ ಮತ್ತು ಪುರುಷರ ವಾರ್ಡ್ ಮತ್ತು ಶೌಚಾಲಯಗಳನ್ನು ಸಾರ್ವಜನಿಕ ವಾರ್ಡ್ನಿಂದ ಪ್ರತ್ಯೇಕವಾಗಿ ನಿರ್ವಹಿಸಬೇಕು ಎಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸಂವಿಧಾನದ ಅರಿವಿನೊಂದಿಗೆ ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಿ: ನ್ಯಾ. ಅಕ್ಷತಾ ಸಿ.ಆರ್ ಕರೆ
ಸಕಾರ್ಯಕ್ರಮದ ಜಾಥಾವನ್ನು ಉದ್ಘಾಟಿಸಿದ ಮೈನಳ್ಳಿ ಆರೋಗ್ಯ ಸಮಿತಿಯ ಸದಸ್ಯರಾದ ಡ್ಯಾನಿಯಲ್ ಸಿದ್ದಿ ಅವರು, “ಮೈನಳ್ಳಿಯಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವವರೆಗೂ ಮತ್ತು ಉಳಿದ ನಾಲ್ಕು ಕೇಂದ್ರಗಳಲ್ಲಿನ ಆರೋಗ್ಯ ಸೇವೆಯನ್ನು ಸರಿಪಡಿಸುವ ವರೆಗೂ ನಮ್ಮ ಈ ಅಭಿಯಾನವನ್ನು ನಿಲ್ಲಿಸುವುದಿಲ್ಲ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಾರೆನ್ಸ್ ಸಿದ್ಧಿ ಅವರು ಸ್ವಾಗತಿಸಿದರು. ಹಜರತ್ ಮತ್ತು ಭರಮಣ್ಣ ಸಂಗಡಿಗರು ಜಾಗೃತಿ ಗೀತೆಗಳನ್ನು ಹಾಡಿದರು. ಮಮತಾ, ಜಯಶ್ರೀ, ತೇಜಸ್ವಿನಿ, ದೀಪ ಮತ್ತು ಸಿಸ್ಟರ್ ಶೆರಲ್, ಲೊಯೋಲ ಜನಸ್ಪೂರ್ತಿ ಮಹಿಳಾ ಸ್ವಸಹಾಯ ಸಂಘ, ಕಲ್ಪವೃಕ್ಷ ಕಟ್ಟಡ ಕಾರ್ಮಿಕರ ಯೂನಿಯನ್, ಯುವರತ್ನ ಯುವ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಮುಂಡಗೋಡ ಸೇರಿದಂತೆ ಹಲವು ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.





