ಮುಂಡಗೋಡ: ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ದಕ್ಷ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರು ಅವರ ಸ್ಮರಣಾರ್ಥವಾಗಿ ಇಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅತ್ಯಂತ ಭಾವುಕ ವಾತಾವರಣದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಠಾಣೆಯ ಎಲ್ಲಾ ಸಿಬ್ಬಂದಿ ಹಾಗೂ ಗಣ್ಯರು ಮೇಣದಬತ್ತಿ ಹಚ್ಚಿ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಗಲಿದ ಚೇತನಕ್ಕೆ ನಮನ ಸಲ್ಲಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿ.ಪಿ.ಐ ರಂಗನಾಥ ನೀಲಮ್ಮನವರ ಅವರು,“ಯಲ್ಲಾಲಿಂಗ ಅವರು ಅತ್ಯುತ್ತಮ ಆಡಳಿತಾಧಿಕಾರಿಯಾಗಿದ್ದರು. ಅವರ ನಿಧನದ ಸುದ್ದಿ ನಮಗೆ ತೀವ್ರ ದುಃಖ ತಂದಿದೆ. ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ದೇವರು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ” ಎಂದು ಕಂಬನಿ ಮಿಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಂಜುನಾಥ ಪಾಟೀಲ್ ಅವರು,“ಯಲ್ಲಾಲಿಂಗ ಅವರು ಭ್ರಷ್ಟಾಚಾರ ರಹಿತ, ಕಳಂಕರಹಿತ ಅಧಿಕಾರಿಯಾಗಿದ್ದರು. ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಗುಣ ಅವರದಾಗಿತ್ತು.
ಇಂತಹ ದಕ್ಷ ಅಧಿಕಾರಿಯ ಅಗಲಿಕೆ ತಾಲ್ಲೂಕಿಗೆ ಹಾಗೂ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ಭಗವಂತ ಕೊಟ್ಟ ಈ ದೇಹವನ್ನು ನಾವು ಸಾಧ್ಯವಾದಷ್ಟು ಕಾಪಾಡಿಕೊಂಡು ಸಾಗಬೇಕು” ಎಂದು ಹೇಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಾತ್ರಾ ಮಹೋತ್ಸವಗಳಲ್ಲೂ ಜೂಜಿನ ಕರಿನೆರಳು; ಬೀಳಬೇಕಿದೆ ಬ್ರೇಕ್
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಮೌನ ಆಚರಿಸುವ ಮೂಲಕ ತಮ್ಮ ನೆಚ್ಚಿನ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರವಿ ಹಾವೇರಿ, ಮಂಜುನಾಥ ಹೆಚ್.ಪಿ., ಶಂಕರ ಲಮಾಣಿ, ವಿಶ್ವನಾಥ ನಾಯರ್, ತನ್ವೀರ್ ಅಹ್ಮದ್ ಮಿರ್ಜಾನಕರ್ ಸೇರಿದಂತೆ ಹಲವರು ಭಾಗವಹಿಸಿ ಯಲ್ಲಾಲಿಂಗ ಕುನ್ನೂರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ತಾಲ್ಲೂಕಿನ ಜನತೆ ಕೂಡ ಈ ದಕ್ಷ ಅಧಿಕಾರಿಯ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.





