ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಹಚ್ಚಿ ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ನಡೆಸಿದ್ದಾರೆ.
ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದ ಆರೋಪದ ಮೇಲೆ ಒಟ್ಟು ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿನಾಂಕ 30-12-2025ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದೆ. ಇಂದೂರ ಗ್ರಾಮದ ಮಂಜುನಾಥ ಕರೆಪ್ಪ ಹರಿಜನ ಮತ್ತು ಜ್ಞಾನದೇವ ದೊಂಡಿಬಾ ಹೆಬ್ಬಳ್ಳಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ದಾಳಿಯ ಸಂದರ್ಭದಲ್ಲಿ ಮೈಲಾರಿ ತಿಪ್ಪಣ್ಣ ಹರಿಜನ, ಸಂತೋಷ ನಿಂಗಪ್ಪ ಹರಿಜನ, ಮಂಜು ಗಾಳಪ್ಪ ಹರಿಜನ, ಮಂಜು ಪುಟ್ಟಪ್ಪ ಹರಿಜನ ಹಾಗೂ ಫಕೀರೇಶ ಮಹಾದೇವಪ್ಪ ಹರಿಜನ ಎಂಬುವವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ವರದಿಯಾದರೂ ಅಲುಗಾಡದ ಆಡಳಿತ: ಅಧಿಕಾರಿಗಳ ‘ಮೌನ’ಕ್ಕೆ ಕಾರಣವೇನು?
ಪೊಲೀಸರು ದಾಳಿಯ ವೇಳೆ ಜುಗಾರಾಟಕ್ಕೆ ಬಳಸುತ್ತಿದ್ದ 52 ಇಸ್ಪೀಟ್ ಎಲೆಗಳು ಹಾಗೂ ಪಣವಾಗಿ ಇಟ್ಟಿದ್ದ 1,500 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯು ಮುಂಡಗೋಡ ಪೊಲೀಸ್ ವೃತ್ತ ನಿರೀಕ್ಷಕರಾದ (CPI) ರಂಗನಾಥ ನೀಲಮ್ಮನವರ ಅವರ ಮಾರ್ಗದರ್ಶನದಲ್ಲಿ ನಡೆದಿದೆ.
ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿರುವುದರಿಂದ (Non-Cognizable), ಆರಂಭದಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತದನಂತರ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು, ಕಲಂ-87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





