ಮುಂಡಗೋಡ: ಹಾವುಗಳನ್ನು ಕಂಡರೆ ಯಾರಿಗೆ ತಾನೇ ಭಯವೀರುವುದಿಲ್ಲ ಹಾವು ಹೋದ ದಾರಿ ಎಂದು ಗೊತ್ತಾದರೆ ಸಾಕು ಎಷ್ಟೋ ಜನ ಆ ದಾರಿಯಲ್ಲಿ ತಿರುಗಾಡಲು ಸಹ ಭಯಪಡುತ್ತಾರೆ. ಎಲ್ಲಾ ಹಾವುಗಳು ವಿಷಕಾರಿ ಎಂದು ತಿಳಿದು ಯಾರಿಗೂ ತೊಂದರೆ ಕೊಡದೆ ಇದ್ದರೂ ಅವುಗಳನ್ನು ಕೊಲ್ಲುವರು ಇದ್ದಾರೆ. ಹಾಗೂ ಹಾವುಗಳು ಬಗ್ಗೆ ನಮ್ಮ ಜನರಲ್ಲಿ ಇರುವ ಅತಿಯಾದ ಮೂಢನಂಬಿಕೆ ಅವುಗಳ ಸಂತತಿ ಕ್ರಮೇಣವಾಗಿ ಕಡಿಮೆ ಆಗಲು ಕಾರಣವಾಗುತ್ತಿದೆ.
ಆದರೆ ಮುಂಡಗೋಡ ತಾಲ್ಲೂಕಿನ ಪಾಳಾ ಉಪವಲಯ ಅರಣ್ಯಧಿಕಾರಿ ಸುನೀಲ್ ಹೊನ್ನಾವರ ಮತ್ತು ಪಾಳಾ ಗಸ್ತು ಅರಣ್ಯ ಪಾಲಕರಾದ ಮುತ್ತುರಾಜ ಹಳ್ಳಿ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿಗಳು ನಾಗರಹಾವುಗಳು ಮತ್ತು ಇತರೆ ಹಾವುಗಳ ಬಗ್ಗೆ ಜನರಲ್ಲಿ ಇರುವ ಮೂಡನಂಬಿಕೆ ಹೊಗಲಾಡಿಸಿ ಪರಿಸರದ ಸಮತೋಲನಕ್ಕೆ ಸರಿಸೃಪಗಳ ಅವಶ್ಯಕತೆ ಇದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಜೀವದ ಹಂಗು ತೊರೆದು ಹಾವುಗಳನ್ನು ರಕ್ಷಣೆ ಮಾಡುತ್ತಿರುವುದನ್ನು ನೋಡಿದ ತಾಲ್ಲೂಕಿನ ಜನತೆ ಇವರು ನೀಜವಾದ ವನ್ಯಜೀವಿ ಸಂರಕ್ಷಕರು ಎಂದು ಇವರ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇತ್ತೀಚೆಗೆ ಮುಂಡಗೋಡ ತಾಲ್ಲೂಕಿನ ಮಳಗಿಯ ಇಂದ್ರಾನಗರ ಪ್ಲಾಟ್ನಲ್ಲಿ ಬಂದಿದ್ದ ದೊಡ್ಡ ಗಾತ್ರದ ನಾಗರಹಾವನ್ನು ಈ ಇಬ್ಬರೂ ಅಧಿಕಾರಿಗಳು ಅತ್ಯಂತ ನೈಪುಣ್ಯದಿಂದ ರಕ್ಷಿಸಿ, ಕಾಡಿಗೆ ಬಿಡುವ ಮೂಲಕ ಮತ್ತೊಮ್ಮೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಅಷ್ಟೇ ಅಲ್ಲದೆ ಅನೇಕ ಕಡೆ ಇದೆ ರೀತಿ ಇಬ್ಬರೂ ಅಧಿಕಾರಿಗಳು ಅನೇಕ ಹಾವುಗಳ ರಕ್ಷಣೆಯನ್ನು ಮಾಡಿದ್ದಾರೆ. ಅಧಿಕಾರಿಗಳ ಮೆಚ್ಚುಗೆಗೆ ಕಾರಣವೇನೆಂದರೆ ಈ ಇಬ್ಬರು ಅಧಿಕಾರಿಗಳು ಕೇವಲ ಹಾವುಗಳನ್ನು ಹಿಡಿದು ಹೋಗುವುದಿಲ್ಲ. ಅವುಗಳ ಜೀವ ಸಂರಕ್ಷಣೆ ಮಾಡಿ ಅವುಗಳ ಜೀವ ರಕ್ಷಕರಾಗಿದ್ದಾರೆ ಹಾಗೂ ಪರಿಸರ ಸಮತೋಲನ ಕಾಯಲು ನೆರವಾಗಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಪ್ರತಿ ರಕ್ಷಣಾ ಕಾರ್ಯದ ನಂತರವೂ ಜನರಿಗೆ ಹಾವುಗಳ ಬಗ್ಗೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಹಾವುಗಳು ಪರಿಸರಕ್ಕೆ ಹೇಗೆ ಮುಖ್ಯ ಎಂದು ಮನವರಿಕೆ ಮಾಡಿಕೊಡುತ್ತಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪರವಾನಗಿ ಇಲ್ಲದೆ ಮರಳು ಸಂಗ್ರಹ; ಅಧಿಕಾರಿಗಳ ವಿರುದ್ಧ ಜನಾಕ್ರೋಶ
ಅಪಾಯದಲ್ಲಿ ಸೇವೆ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಮನೆ-ಮನೆಗೆ ತೆರಳಿ ಸಾರ್ವಜನಿಕ ಸ್ಥಳಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಬೇರೆ ಕಡೆ ಬೀಡುವ ಪ್ರಕ್ರಿಯೆ ತುಂಬಾ ಅಪಾಯದಿಂದ ಕೂಡಿರುತ್ತದೆ. ಈ ಸಾಹಸದ ಕಾರ್ಯಕ್ಕೆ ಇವರ ಬಗ್ಗೆ ಜನರಲ್ಲಿ ಅಪಾರ ಗೌರವ ಮೂಡಿದೆ. ಸಮರ್ಪಣಾ ಮನೋಭಾವದ ಅಧಿಕಾರಿಗಳು ನಮ್ಮ ತಾಲ್ಲೂಕಿಗೆ ಹೆಮ್ಮೆ ಎಂದು ಸ್ಥಳಿಯರ ಅಭಿಪ್ರಾಯವಾಗಿದೆ. ಕೇವಲ ಅವರು ತಮ್ಮ ಕರ್ತವ್ಯ ನಿರ್ವಹಿಸದೆ, ಪ್ರೀತಿಯಿಂದ ಪ್ರಾಣಿಗಳನ್ನು ರಕ್ಷಿಸುತ್ತಾರೆ ಎಂಬ ಅಭಿಪ್ರಾಯ ಜನರಲ್ಲಿದೆ. ಮುಂಡಗೋಡ ತಾಲೂಕಿನ ಜನರ ಹೃದಗಳನ್ನು ಗೆದ್ದಿರುವ ಈ ಇಬ್ಬರು ಅರಣ್ಯಾಧಿಕಾರಿಗಳ ಸೇವೆ ಹೀಗೇ ಮುಂದುವರಿಯಲಿ ಎಂಬುದು ತಾಲ್ಲೂಕಿನ ಪ್ರಾಣಿ ಪ್ರಿಯರ ಆಶಯವಾಗಿದೆ .





