ಮುಂಡಗೋಡ: ತುರ್ತು ಸಂದರ್ಭದಲ್ಲಿ 108 ಅಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಗರ್ಭಿಣಿಯೊಬ್ಬರು ಚಲಿಸುವ ವಾಹನದಲ್ಲೇ ಸುರಕ್ಷಿತವಾಗಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಅತ್ತಿವೇರಿ ಗ್ರಾಮದ ನಿವಾಸಿ ಶ್ರೀಮತಿ ಬಿಬಿ ಆಯಿಷಾ ಅವರಿಗೆ ಇಂದು ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೂಡಲೇ 108 ತುರ್ತು ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಕರೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ತುರ್ತು ವೈದ್ಯಕೀಯ ತಂತ್ರಜ್ಞರಾದ ಧನರಾಜ್ ಸಿ. ಮತ್ತು ಚಾಲಕ ಕೆಂಚೇಶ್ ಅವರು ಅಂಬ್ಯುಲೆನ್ಸ್ನೊಂದಿಗೆ ಸ್ಥಳಕ್ಕೆ ಧಾವಿಸಿ, ಗರ್ಭಿಣಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಹುನಗುಂದ ಕ್ರಾಸ್ ಬಳಿ ಗರ್ಭಿಣಿಗೆ ಹೆರಿಗೆ ನೋವು ಉಲ್ಬಣಗೊಂಡಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯಕೀಯ ತಂತ್ರಜ್ಞ ಧನರಾಜ್ ಅವರು ಚಾಲಕನ ನೆರವಿನೊಂದಿಗೆ ಅಂಬ್ಯುಲೆನ್ಸ್ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ಶಿರವಾಡ ಡಂಪಿಂಗ್ ಯಾರ್ಡ್ನಲ್ಲಿ ಭಾರಿ ಬೆಂಕಿ – ಆತಂಕದಲ್ಲಿ ಸ್ಥಳೀಯ ನಿವಾಸಿಗಳು
ಬಿಬಿ ಆಯಿಷಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ನಂತರ ತಾಯಿ ಮತ್ತು ಮಗುವನ್ನು ಮುಂಡಗೋಡ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಮಾನವೀಯತೆ ಮೆರೆದ 108 ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.





