ಮುಂಡಗೋಡ ತಾಲೂಕಿನಲ್ಲಿ ಮರಳು ಸಂಗ್ರಹಣೆ ಅಡ್ಡೆಗಳನ್ನು ಸ್ಥಾಪಿಸಿ ಉಸುಕು ಮತ್ತು ಎಂ ಸ್ಯಾಂಡ್ ಮಾರಾಟ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂದಾಜಿನ ಪ್ರಕಾರ, ಹುಬ್ಬಳ್ಳಿ–ಶಿರಸಿ ಮಾರ್ಗದ ಪಕ್ಕದಲ್ಲೇ ಸದ್ಯಕ್ಕೆ ಸುಮಾರು 17 ಮರಳು ಮತ್ತು ಎಂ-ಸ್ಯಾಂಡ್ ಅಡ್ಡೆಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಕಾನೂನುಬದ್ಧವಾಗಿ ಅನುಮತಿ ಪಡೆದದ್ದು ಕೇವಲ ಒಂದು ಅಡ್ಡೆ ಮಾತ್ರ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ. ಉಳಿದ ಇತರ ಅಡ್ಡೆಗಳು ಯಾವುದೇ ಅಧಿಕೃತ ಅನುಮತಿ ಪಡೆಯದೇ ದಂಧೆ ನಡೆಸುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಇಷ್ಟು ರಾಜಾರೋಷವಾಗಿ ಮರಳುದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಈ ನಡೆ ಜನರಲ್ಲಿ ಅನುಮಾನ ಮೂಡುವಂತೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಹಲವಾರು ಗೊಂದಲಗಳಿವೆ. ಬೇರೆ ಜಿಲ್ಲೆಗಳಲ್ಲಿ ಸಿಆರ್ಝಡ್ ರಹಿತ ವಲಯದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಸಿಕ್ಕಿದೆ. ಆದರೆ ಉತ್ತರ ಕನ್ನಡದಲ್ಲಿ ಸಿಆರ್ಝಡ್ ವಲಯದಲ್ಲಿ ಮಾತ್ರ ಮರಳು ದಿಬ್ಬಗಳು ಹೆಚ್ಚಿದ್ದು ಇಲ್ಲಿ ಅನುಮತಿ ಸಿಕ್ಕಿಲ್ಲ. ಒಂದು ಸಲ ಅನುಮತಿ ಸಿಕ್ಕರೆ ಮತ್ತೊಂದು ಸಲ ಅನುಮತಿ ಸಿಗುವುದಿಲ್ಲ ಈ ಗೊಂದಲದಿಂದ ಮರಳು ವ್ಯಾಪಾರಸ್ಥರು ಜಿಲ್ಲೆಯ ಮರಳನ್ನು ನೆಚ್ಚದೆ ತಾಲ್ಲೂಕಿಗೆ ಸಮೀಪವಿರುವ ಪಕ್ಕದ ಸ್ಥಳಗಳಿಂದ ಅದರಲ್ಲೂ ಮುಖ್ಯವಾಗಿ ಶಿರಹಟ್ಟಿ, ಮಾಗಡಿ, ಯರಗಟ್ಟಿ ಹಾಗೂ ಲಕ್ಷ್ಮೇಶ್ವರ ಭಾಗಗಳಿಂದ ಟ್ರ್ಯಾಕ್ಟರ್ ಹಾಗೂ ಲಾರಿಗಳ ಮೂಲಕ ಪ್ರತಿದಿನ ಮರಳು ಮತ್ತು ಎಂ-ಸ್ಯಾಂಡ್ ತಂದು ತಾಲ್ಲೂಕಿನ ವ್ಯಾಪ್ತಿಯಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ.
ಇದರ ಪರಿಣಾಮವಾಗಿ ಸರ್ಕಾರಕ್ಕೆ ತೆರಿಗೆ ನಷ್ಟವಾಗುವುದರ ಜೊತೆಗೆ ಸ್ಥಳೀಯ ರಸ್ತೆಗಳು ಹಾನಿಗೊಳಗಾಗುತ್ತಿವೆ. ಮುಂಜಾನೆ ಮತ್ತು ಹಗಲು ಹೊತ್ತಿನಲ್ಲಿ ಮರಳು ಸಾಗಣೆ ವಾಹನಗಳು ತಾಲ್ಲೂಕಿನ ಮುಖ್ಯರಸ್ತೆಗಳಲ್ಲಿ ಸಂಚರಿಸುವುದರಿಂದ ಧೂಳಿನಲ್ಲೆ ದ್ವಿಚಕ್ರ ವಾಹನ ಸವಾರರು ಸಂಚಿರಸಬೇಕಾದ ಪರಿಸ್ಥಿತಿ ಇದೆ. ಮತ್ತು ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಇದರಿಂದ ಹಾಳಾಗುತ್ತಿವೆ. ಮತ್ತು ನೇರವಾಗಿ ಇದು ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳ ಸೂಚನೆ.
ಕಾನೂನು ಸ್ಪಷ್ಟ — ಅನುಮತಿ ಮತ್ತು ತೆರಿಗೆ ಕಡ್ಡಾಯ ಕರ್ನಾಟಕ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಾವಳಿ ಪ್ರಕಾರ, ಮರಳು ಅಥವಾ ಎಂ-ಸ್ಯಾಂಡ್ ಸಂಗ್ರಹಣೆ, ಸಾಗಾಟ ಹಾಗೂ ಮಾರಾಟ ಮಾಡಲು ಡೀಲರ್ ಲೈಸೆನ್ಸ್ ಮತ್ತು ಟ್ರಾನ್ಸಿಟ್ ಪಾಸ್ ಕಡ್ಡಾಯ. ಬೇರೆ ಜಿಲ್ಲೆಯಿಂದ ಮರಳು ತರಬೇಕಾದರೆ ಮೂಲ ಜಿಲ್ಲೆಯಿಂದ ರಾಯಲ್ಟಿ ಪಾವತಿಸಿದ ರಶೀದಿ ಮತ್ತು ಡಿಸ್ಪ್ಯಾಚ್ ಪಾಸ್ ಇರಲೇಬೇಕು. ಪ್ರತಿ ವಾಹನದಲ್ಲೂ GPS ಟ್ರ್ಯಾಕಿಂಗ್ ವ್ಯವಸ್ಥೆ ಇರಬೇಕು ಮತ್ತು ಮಾರಾಟದ ದರವನ್ನು ಜಿಲ್ಲಾ ಗಣಿಗಾರಿಕೆ ಅಧಿಕಾರಿಗಳು ನಿಗದಿ ಮಾಡುತ್ತಾರೆ. ಸಾಮಾನ್ಯವಾಗಿ ಪ್ರತಿ ಟ್ರ್ಯಾಕ್ಟರ್ ಮರಳಿಗೆ ₹800 ರಿಂದ ₹1,200 ಹಾಗೂ ಪ್ರತಿ ಲಾರಿ ಲೋಡ್ಗೆ ₹3,000 ರಿಂದ ₹5,000 ವರೆಗೆ ದರ ನಿಗದಿಯಾಗಿರುತ್ತದೆ (ಆಯಾ ಪ್ರದೇಶಕ್ಕೆ ತಕ್ಕಂತೆ ದರ ಬದಲಾಗುತ್ತದೆ). ಈ ಮಿತಿಗಿಂತ ಹೆಚ್ಚಾಗಿ ಮಾರಾಟ ಮಾಡಿದರೆ ಅಥವಾ ಅನುಮತಿಯಿಲ್ಲದೆ ಸಾಗಣೆ ಮಾಡಿದರೆ ಅದು ಅಕ್ರಮ ವ್ಯಾಪಾರವೆಂದು ಪರಿಗಣಿಸಲಾಗುತ್ತದೆ. ನಿಯಮ ಉಲ್ಲಂಘನೆಗೆ ದಂಡ ವಿಧನೆ Karnataka Minor Mineral Concession (Amendment) Rules, 2024 ಪ್ರಕಾರ —GPS ಇಲ್ಲದೆ ಮರಳು ಸಾಗಿಸಿದರೆ ₹25,000 ದಂಡ. ನಿಗದಿತ ಸ್ಥಳಕ್ಕಿಂತ ಬೇರೆಡೆ ಖಾಲಿ ಮಾಡಿದರೆ ₹10,000 ದಂಡ. GPS ತಿದ್ದಾಟ ಮಾಡಿದರೆ ₹5,000 ದಂಡ. ಡಿಸ್ಪ್ಯಾಚ್ ಪಾಸ್ ಇಲ್ಲದೆ ಸಾಗಿಸಿದಲ್ಲಿ ರಾಯಲ್ಟಿಯ ಐದು ಪಟ್ಟು ದಂಡ. ಇದಲ್ಲದೆ, ಅನುಮತಿ ಇಲ್ಲದೆ ಮರಳು ಸಾಗಣೆ ಮಾಡಿದ ವಾಹನಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ.
ಕ್ರಮಕೈಗೊಳ್ಳದ ಇಲಾಖೆ ಮೇಲೆ ಅನುಮಾನ, ಎಲ್ಲಾ ಕಾನೂನುಗಳು ಸ್ಪಷ್ಟವಾಗಿದ್ದರೂ, ಅಧಿಕಾರಿಗಳು ಇನ್ನೂ ಕ್ರಮ ಕೈಗೊಳ್ಳಲದೆ ಇರುವುದು ಏಕೆ ಎಂಬುದು ಪ್ರಶ್ನೆ ಮೂಡುವಂತೆ ಮಾಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.





