ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಆದಿಜಾಂಬವ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಶಾಲಾ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆಯವರ 195ನೇ ಜನ್ಮ ದಿನಾಚರಣೆ ಹಾಗೂ ಮಹಿಳಾ ಶೈಕ್ಷಣಿಕ ಚಿಂತನಾ ಕಾರ್ಯಕ್ರಮವನ್ನು ಇತ್ತೀಚೆಗೆ (ಜ. 03) ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಅಕ್ಷರದ ಮಾತೆ ಸಾವಿತ್ರಿಬಾಯಿ ಪುಲೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಡಗೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಮಾ ಜಿ. ಅವರು, “ಪ್ರತಿಯೊಂದು ಮನೆಯ ತಾಯಂದಿರು ಸಾವಿತ್ರಿಬಾಯಿ ಪುಲೆಯವರ ಪ್ರತಿರೂಪವಾಗಿದ್ದಾರೆ.
ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬೇಕು. ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ಶಾಲೆಗೆ ಕೀರ್ತಿ ತರಬೇಕು. ಎಸ್. ಪಕ್ಕೀರಪ್ಪನವರು ವಿವಿಧ ಜನಾಂಗದ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ಸೇವೆ ಶ್ಲಾಘನೀಯ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷರು ಹಾಗೂ ಕೆ.ಡಿ.ಎಸ್.ಎಸ್. ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಎಸ್. ಫಕ್ಕೀರಪ್ಪ ಅವರು ಮಾತನಾಡಿ, “ಮೇಲ್ವರ್ಗದವರಿಂದ ತೀವ್ರ ಭೇದಭಾವವಿದ್ದ ಕಾಲದಲ್ಲೂ ಸಾವಿತ್ರಿಬಾಯಿ ಪುಲೆಯವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.
ಅವರು ಶಾಲೆಗೆ ಹೋಗುವಾಗ ಸಮಾಜದ ಕಿಡಿಗೇಡಿಗಳು ಅವರ ಮೇಲೆ ಶಗಣಿ, ಮಣ್ಣನ್ನು ಎಸೆಯುತ್ತಿದ್ದರು. ಆದರೂ ಎದೆಗುಂದದೆ ಅವರು ಅಕ್ಷರ ಕ್ರಾಂತಿ ಮಾಡಿದರು. ಇಂದಿನ ಹೆಣ್ಣು ಮಕ್ಕಳಿಗೆ ಅವರು ನಿಜವಾದ ಮಾದರಿ,” ಎಂದು ಹೇಳಿದರು.
ವಿಶೇಷವಾಗಿ 8, 9 ಮತ್ತು 10ನೇ ತರಗತಿಯ ಒಟ್ಟು ನಾಲ್ವರು ವಿದ್ಯಾರ್ಥಿಗಳು ಸಾವಿತ್ರಿಬಾಯಿ ಪುಲೆ ಹಾಗೂ ಜ್ಯೋತಿಬಾ ಪುಲೆ ಸೇರಿದಂತೆ ವಿವಿಧ ಮಹಾಪುರುಷರ ಕುರಿತು ನೀಡಿದ ಅತ್ಯುತ್ತಮ ಭಾಷಣ ಸಭಿಕರ ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಬಿಇಒ ಸುಮಾ ಜಿ. ಹಾಗೂ ಡಿ.ಎಸ್.ಎಸ್. ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಶ್ರೀಮತಿ ಯಲ್ಲವ್ವ ಹರಿಜನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಕಳಚಿದ ಕಬ್ಬಿನ ಟ್ರೈಲರ್ ಕೊಂಡಿ – ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ!
ಆದಿಜಾಂಬವ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎಸ್. ಡಿ. ಮುಡೆಣ್ಣವರ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಡಾ. ಪಿ. ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶ್ರೀ ರವಿ ಅಕ್ಕಿವಳ್ಳಿ ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಗೋಪಾಲ ನಡಕಿನಮನಿ, ಪದಾಧಿಕಾರಿಗಳಾದ ಸಂತೋಷ ಕಟ್ಟಿಮನಿ ಕೆಂದಲಗೇರಿ, ಹನುಮಂತ ಕಟ್ಟಿಮನಿ, ಹುಲಗಪ್ಪ ಬೋವಿವಡ್ಡರ, ನಾಗರಾಜ ಕಟ್ಟಿಮನಿ, ಜೂಜೆ ಸಿದ್ದಿ, ಶ್ರೀಮತಿ ಯಲ್ಲವ್ವ ಹರಿಜನ, ಲಕ್ಷ್ಮಣ ಬೋವಿವಡ್ಡರ, ಹಿರಿಯ ಪತ್ರಕರ್ತ ನಜಿರುದ್ದೀನ್ ತಾಡಪತ್ರಿ, ಹಿರಿಯ ಶಿಕ್ಷಕ ಎಸ್. ಸಿ. ಪಾಟೀಲ, ಡಾ. ಬಿ.ಆರ್. ಅಂಬೇಡ್ಕರ್ ಸಹಕಾರಿ ಸಂಘದ ಸಿಬ್ಬಂದಿಗಳು, ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





