ಮುಂಡಗೋಡ: ತೋಟಗಾರಿಕೆ ಕ್ಷೇತ್ರದಲ್ಲಿನ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಮುಂಡಗೋಡು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಕೃಷ್ಣ ಟಿ. ಕುಳೂರ ಅವರಿಗೆ ಪ್ರತಿಷ್ಠಿತ “ವಿಶ್ವ ದರ್ಶನ ನ್ಯಾಷನಲ್ ಐಕಾನ್ ಅವಾರ್ಡ್-2025” ಹಾಗೂ “ತೋಟಗಾರಿಕೆ ಕೃಷಿ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ಆಶ್ರಯದಲ್ಲಿ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ 6ನೇ ರಾಜ್ಯ ಭಾವೈಕ್ಯತಾ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಕೃಷ್ಣ ಕುಳ್ಳೂರ ಅವರು ರೈತ ಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನವರಾದ ಇವರು, 2007ರಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಿಂದ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಶಿರಸಿ ಹಾಗೂ ಮುಂಡಗೋಡು ತಾಲೂಕುಗಳಲ್ಲಿ ಸೇವೆ ಸಲ್ಲಿಸುತ್ತಾ, ರೈತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?
ವಿಶೇಷವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ವಿಸ್ತರಣೆ ಮತ್ತು ರೈತರ ಆರ್ಥಿಕ ಸಬಲೀಕರಣಕ್ಕಾಗಿ ಇವರು ಹಗಲಿರುಳು ಶ್ರಮಿಸಿದ್ದಾರೆ. ಇವರ ಈ ಸಾಧನೆಯನ್ನು ಪರಿಗಣಿಸಿ ವಿಶ್ವ ದರ್ಶನ ಪತ್ರಿಕೆಯ ಸಂಪಾದಕರಾದ ಡಾ. ಎಸ್. ಎಸ್. ಪಾಟೀಲ್ ಅವರ ನೇತೃತ್ವದ ಸಮಿತಿಯು ಈ ಗೌರವಕ್ಕೆ ಇವರನ್ನು ಆಯ್ಕೆ ಮಾಡಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಶ್ರೀ ಕೃಷ್ಣ ಕುಳೂರ ಅವರಿಗೆ ಇಲಾಖೆಯ ಸಹೋದ್ಯೋಗಿಗಳು, ರೈತ ಬಾಂಧವರು ಹಾಗೂ ಹಿತೈಷಿಗಳು ಅಭಿನಂದನೆಗಳ ಸುರಿಮಳೆಗರೆದಿದ್ದಾರೆ. ಈ ಪ್ರಶಸ್ತಿಯು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.





