ಮುಂಡಗೋಡ-ಯಲ್ಲಾಪುರ ಮಾರ್ಗದಲ್ಲಿರುವ ತಟ್ಟಿಹಳ್ಳಿ ಗ್ರಾಮದ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಭೀಕರ ಬೆಂಕಿ ಅನಾಹುತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ದಿ. ಸಾವಕ್ಕ ಜೀವನ ಅಗಡಿ ಅವರಿಗೆ ಸೇರಿದ ಹೊಲದಲ್ಲಿದ್ದ ಸುಮಾರು ಹತ್ತು ಎಕರೆಗೂ ಅಧಿಕ ಪ್ರದೇಶದ ಕಬ್ಬಿನ ಬೆಳೆ ಹಾಗೂ ಕೃಷಿ ಉಪಕರಣಗಳು ಅಗ್ನಿಗೆ ಆಹುತಿಯಾಗಿವೆ.
ಘಟನೆಯ ವಿವರ: ತಟ್ಟಿಹಳ್ಳಿ ಸರ್ವೇ ನಂಬರ್ 16 ಮತ್ತು 17 ರಲ್ಲಿರುವ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಹೊಲದ ಮೇಲೆ ಹಾದು ಹೋಗಿರುವ ಥ್ರೀ ಫೇಸ್ (Three Phase) ವಿದ್ಯುತ್ ಲೈನ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಹೊಲದ ಮಾಲೀಕರು ತಿಳಿಸಿದ್ದಾರೆ.
ಈ ಬೆಂಕಿ ಅನಾಹುತದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬೀಜಕ್ಕಾಗಿ ಬೆಳೆಸಿದ್ದ ಗುಣಮಟ್ಟದ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರೊಂದಿಗೆ ಸುಮಾರು 6 ಎಕರೆ ಪ್ರದೇಶದಲ್ಲಿದ್ದ ಕುಳೆ ಕಬ್ಬು (Ratoon Crop) ಕೂಡ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ.
ಕೇವಲ ಬೆಳೆ ಮಾತ್ರವಲ್ಲದೆ, ಕೃಷಿ ನೀರಾವರಿಗಾಗಿ ಅಳವಡಿಸಲಾಗಿದ್ದ ಪೈಪ್ಗಳು ಹಾಗೂ ಜೆಟ್ ಸೆಟ್ಗಳು ಕೂಡ ಬೆಂಕಿಯಲ್ಲಿ ಬೆಂದು ಹೋಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಓಡಿಸಿದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿಗಳ ಖಡಕ್ ಸೂಚನೆ
ಹೊಲದ ಮಧ್ಯಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ಗಳ ನಿರ್ವಹಣೆಯ ಕೊರತೆಯೇ ಈ ಅನಾಹುತಕ್ಕೆ ಮುಖ್ಯ ಕಾರಣ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ರೈತ ಕುಟುಂಬ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಹಾಗೂ ರೈತರು ಒತ್ತಾಯಿಸಿದ್ದಾರೆ.





