ಸಾಲ ತೀರಿಸಲು ಸಹಾಯ ಮಾಡುವ ನೆಪದಲ್ಲಿ 21 ಲಕ್ಷ ರೂ. ನೀಡಿ, ಕೊನೆಗೆ ಸಹಾಯ ಕೇಳಿಕೊಂಡು ಬಂದಂತಹವರ ಪೂರ್ತಿ ಆಸ್ತಿಯನ್ನೇ ಕಬಳಿಸಿರುವ ವಂಚನೆ ಪ್ರಕರಣವು ಮುಂಡಗೋಡದಲ್ಲಿ ಬೆಳಕಿಗೆ ಬಂದಿದೆ.
ಮುಂಡಗೋಡ ಪಟ್ಟಣದ ಜಮೀರ್ ಅಹ್ಮದ್ ದರ್ಗಾವಾಲೆ ಎಂಬಾತ ತನ್ನ ಸಹಚರರೊಂದಿಗೆ ಸೇರಿ ಹಳೂರ ಓಣಿಯ ನಿವಾಸಿಗಳಾದ ರಾಜೇಶ್ ಚಿದಾನಂದ ಹುಲಿಯಪ್ಪನವರ ಹಾಗೂ ಅವರ ತಮ್ಮ ರಾಹುಲ ಹುಲಿಯಪ್ಪನವರ ಇಬ್ಬರನ್ನು ಅಪಹರಿಸಿ, ಮುಂಡಗೋಡ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬಲವಂತವಾಗಿ (ಸರ್ವೇ ನಂ. 73/1, ಕ್ಷೇತ್ರ 02-33-00) ಜಮೀನನ್ನು ತನ್ನ ಹೆಸರಿಗೆ ದಾಖಲಿಸಿ ಕೊಂಡಿದ್ದಾನೆಂದು ಪೋಲಿಸ್ ಠಾಣೆಗೆ ದೂರಿನಲ್ಲಿ ಹೇಳಲಾಗಿದೆ.
ಅಷ್ಟೇ ಅಲ್ಲದೆ ಇಬ್ಬರು ಸಹೋದರರನ್ನು ಗೋವಾ, ಹುಬ್ಬಳ್ಳಿ, ಬಾಂಬೆ, ದೆಹಲಿ, ದಾಂಡೇಲಿ ಸೇರಿದಂತೆ ಹಲವೆಡೆ ಬಲವಂತವಾಗಿ ಹಿಡಿದಿಟ್ಟುಕೊಂಡು ಸುತ್ತಾಡಿಸಿ, ಅವರ ಹೆಸರಿನಲ್ಲಿ ಇದ್ದ ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಜೀರೋ FIR ದಾಖಲಾಗಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಮುಂಡಗೋಡ ಪೋಲಿಸ್ ಠಾಣೆಗೆ ವರ್ಗಾಯಿಸಲಾಗಿದೆ.





