ಮುರುಡೇಶ್ವರ: ಸ್ಕೂಟಿಗೆ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ಮರಳುತ್ತಿದ್ದ ಕಾಲೇಜು ಸಿಬ್ಬಂದಿಯೊಬ್ಬರನ್ನು ಅಡ್ಡಗಟ್ಟಿದ ನಾಲ್ವರು ಮಂಗಳಮುಖಿಯರ ಗುಂಪೊಂದು, ಅವರ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿ, ಕುತ್ತಿಗೆಯಲ್ಲಿದ್ದ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾದ ಘಟನೆ ಭಾನುವಾರ ರಾತ್ರಿ ಮುರ್ಡೇಶ್ವರದ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.
ಮಾವಳ್ಳಿ ನಿವಾಸಿ, ಆರ್.ಎನ್.ಎಸ್. ಡಿಪ್ಲೋಮಾ ಕಾಲೇಜಿನಲ್ಲಿ ಲ್ಯಾಬ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿರುವ ಅರುಣ ಕುಮಾರ ಭಾಸ್ಕರ ನಾಯ್ಕ (32) ದೂರು ನೀಡಿದವರಾಗಿದ್ದಾರೆ. ರವಿವಾರರಂದು ರಾತ್ರಿ ಸುಮಾರು 10:30 ಗಂಟೆಯ ಸಮಯದಲ್ಲಿ ಅರುಣ್ ಕುಮಾರ್ ಅವರು ತಮ್ಮ ಸ್ಕೂಟಿಗೆ ಪೆಟ್ರೋಲ್ ಖಾಲಿಯಾಗಿದ್ದರಿಂದ, ಪೆಟ್ರೋಲ್ ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿ-66ರ ಸರ್ವೀಸ್ ರಸ್ತೆಯಲ್ಲಿ ಮುರ್ಡೇಶ್ವರ ರೈಲ್ವೇ ನಿಲ್ದಾಣದ ಬಳಿ ಬರುತ್ತಿದ್ದರು.
ಈ ವೇಳೆ ಇಬ್ಬರು ಮಂಗಳಮುಖಿಯರು ಕೈ ಮಾಡಿ ಅವರ ಗಾಡಿಯನ್ನು ನಿಲ್ಲಿಸಿದ್ದಾರೆ. ಅರುಣ್ ಅವರು ಸ್ಕೂಟಿ ನಿಲ್ಲಿಸುತ್ತಿದ್ದಂತೆ, ಅಸಭ್ಯ ಪ್ರಶ್ನೆ ಕೇಳಿದ್ದಾರೆ. ಅಷ್ಟರಲ್ಲಿ ರೈಲ್ವೇ ನಿಲ್ದಾಣದ ಕಡೆಯಿಂದ ಬಂದ ಮತ್ತೆ ಇಬ್ಬರು ಮಂಗಳಮುಖಿಯರು ಸೇರಿಕೊಂಡು, ಏಕಾಏಕಿ ಅರುಣ್ ಅವರ ಮೈಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾರೆ. ಅರುಣ್ ಅವರು “ಈ ರೀತಿ ಮಾಡಬೇಡಿ” ಎಂದು ತಡೆದಾಗ, ಅವರಲ್ಲೊಬ್ಬಳು “ನಿನ್ನ ಹತ್ತಿರ ಎಷ್ಟು ದುಡ್ಡಿದೆ?” ಎಂದು ಕೇಳಿದ್ದಾಳೆ. ಅದಕ್ಕೆ ಅರುಣ್ “ನನ್ನ ಬಳಿ ದುಡ್ಡು ಇಲ್ಲ” ಎಂದು ಉತ್ತರಿಸಿದ್ದಾರೆ. ಆಗ ನಾಲ್ವರೂ ಸೇರಿ ಅರುಣ್ ಅವರ ಕೈ ಹಿಡಿದು ಎಳೆದಾಡಿ, ಮೈಮೇಲೆ ಬಿದ್ದು ಅಸಭ್ಯವಾಗಿ ವರ್ತಿಸಿದ್ದಾರೆ. ಈ ಗದ್ದಲದ ನಡುವೆಯೇ, ಮಂಗಳಮುಖಿಯೊಬ್ಬಳು ಅರುಣ್ ಅವರ ಕುತ್ತಿಗೆಗೆ ಕೈಹಾಕಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 15 ಗ್ರಾಂ ತೂಕದ, 1 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಮಂಕಿ ಕಡೆಯ ರಸ್ತೆಗೆ ಓಡಿ ಹೋಗಿ ಪರಾರಿಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿರಸಿ | ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ – ಏಜೆಂಟ್ ಹಾಗೂ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ತಕ್ಷಣವೇ ಅರುಣ್ ಕುಮಾರ್ ಅವರು ಕೂಗಿಕೊಂಡಾಗ, ಅಕ್ಕಪಕ್ಕದ ಜನರು ಸ್ಥಳಕ್ಕೆ ದೌಡಾಯಿಸಿದ್ದಾರೆ, ಅವರಿಗೆ ನಡೆದ ವಿಷಯವನ್ನು ತಿಳಿಸಿ. ಘಟನೆಯ ನಂತರ ಅರುಣ್ ಕುಮಾರ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಾದ ಬಳಿಕ ಪೊಲೀಸರು ತಕ್ಷಣ ಶೋಧ ಕಾರ್ಯ ಆರಂಭಿಸಿದ್ದಾರೆ. ತನಿಖೆ ಮುಂದುವರೆಸಿದ ಮುರ್ಡೇಶ್ವರ ಠಾಣೆ ಪೊಲೀಸರು, ಆರೋಪಿಗಳನನ್ನು ಖಚಿತ ಮಾಹಿತಿ ಆಧಾರದಲ್ಲಿ ಸೋಮವಾರ ರಾತ್ರಿ ನಾಲ್ವರು ಮಂಗಳಮುಖಿಯರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿದೆ. ಮುರ್ಡೇಶ್ವರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಮುಂದಿನ ತನಿಖೆ ಮುಂದುವರೆಸಿದ್ದಾರೆ.





