ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಅವರನ್ನು ಚಿತ್ರದುರ್ಗದ ಎರಡನೇ ಜಿಲ್ಲಾ ಅಪರ ಮತ್ತು ಸತ್ರ ಕೋರ್ಟ್ ಖುಲಾಸೆಗೊಳಿಸಿದೆ. ಸತತ ಮೂರು ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆದಿದ್ದು ಇಂದು ತೀರ್ಪು ಹೊರಬಿದ್ದಿದೆ.
ದಾವಣಗೆರೆಯ ವಿರಕ್ತ ಮಠದಿಂದ ಬಿಗಿ ಭದ್ರತೆಯ ನಡುವೆ ಶಿವಮೂರ್ತಿ ಮುರುಘಾ ಶ್ರೀ ಕೋರ್ಟ್ಗೆ ಹಾಜರಾಗಿದ್ದರು. ನ್ಯಾಯಾಧೀಶರಾದ ಗಂಗಾಧರ್ ಚನ್ನಬಸಪ್ಪ ಹಡಪದ ತೀರ್ಪು ಪ್ರಕಟಿಸಿದೆ.
ಇದನ್ನು ಓದಿದ್ದೀರಾ? ಮುರುಘಾ ಮಠದ ಅಧಿಕಾರ ಮತ್ತೆ ಅತ್ಯಾಚಾರ ಆರೋಪಿ ಮುರುಘಾಶ್ರೀ ಕೈಗೆ!
ಮುರುಘಾ ಶ್ರೀ ಲೈಂಗಿಕ ಕಿರುಕುಳ ನೀಡಿರುವುದಾಗಿ ಮುರುಘಾ ಮಠದ ಹಾಸ್ಟೆಲ್ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಆರೋಪಿಸಿದ್ದರು. ಈ ಸಂಬಂಧ 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅದೇ ವರ್ಷ ಆಗಸ್ಟ್ 27ರಂದು ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು.
ಪ್ರಕರಣದಲ್ಲಿ ಮುರುಘಾ ಶ್ರೀ ಎ1 ಆರೋಪಿ, ಲೇಡಿ ವಾರ್ಡನ್ ರಶ್ಮಿ ಎ2 ಆರೋಪಿ, ಬಸವಾದಿತ್ಯ ಎ3, ಮ್ಯಾನೇಜರ್ ಪರಮಶಿವಯ್ಯ ಎ4 ಮತ್ತು ವಕೀಲ ಗಂಗಾಧರಯ್ಯ ಎ5 ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ 2022ರ ಸೆ.1ರಂದು ಮುರುಘಾ ಶ್ರೀ, ವಾರ್ಡನ್ ರಶ್ಮಿ ಬಂಧನಕ್ಕೆ ಒಳಗಾಗಿದ್ದರು. ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.
ಇನ್ನು 2022ರ ಅ.13 ರಂದು ಮಠದ ಅಡುಗೆ ಸಹಾಯಕಿ ಮತ್ತೊಂದು ದೂರು ನೀಡಿದ್ದು, ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳ ನೀಡಿರುವುದಾಗಿ ಹೇಳಿದ್ದರು. 2023ರ ಜ.10ರಂದು ಮುರುಘಾ ಶ್ರೀ ವಿರುದ್ಧ ದಾಖಲಾದ ಈ ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 761 ಪುಟಗಳ ಚಾರ್ಜ್ಶೀಟ್ ಅನ್ನು ಸಲ್ಲಿಸಿದ್ದರು. ಸದ್ಯ ಒಂದನೇ ಪ್ರಕರಣದ ತೀರ್ಪು ಬಂದಿದ್ದು ಈ ಪ್ರಕರಣದ ತೀರ್ಪು ಇನ್ನಷ್ಟೇ ಹೊರಬರಬೇಕಿದೆ.





